‘ಬೆಂಗಳೂರು ಪೂರ್ವ’ ಹೊಸ ತಾಲ್ಲೂಕುರಚನೆಗೆ ಸದ್ಯದಲ್ಲೇ ಅಧಿಸೂಚನೆ
ಬೆಂಗಳೂರು : ನಾಗರಿಕರ ಅನುಕೂಲಕ್ಕಾಗಿ ಬೆಂಗಳೂರು ನಗರ ಜಿಲ್ಲೆಯ ಪೂರ್ವ ಭಾಗದಲ್ಲಿ ‘ಬೆಂಗಳೂರು ಪೂರ್ವ ’ ಎಂಬ ಹೊಸ ತಾಲ್ಲೂಕನ್ನು ರಚಿಸುವುದಾಗಿ ಮುಖ್ಯ ಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದಾರೆ.
ಅವರು ಮಂಗಳವಾರದಂದು ಗುಂಜೂರು ಪಾಳ್ಯದಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಕುರಿತು ಕಂದಾಯ ಇಲಾಖೆಗೆ ಸೂಚಿಸಲಾಗಿದ್ದು , ಸದ್ಯದಲ್ಲಿಯೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಕೃಷ್ಣ ತಿಳಿಸಿದರು.
ಪಶು ಸಂಗೋಪನೆ ಮತ್ತು ಸಕ್ಕರೆ ಸಚಿವ ಎ. ಕೃಷ್ಣಪ್ಪ ಅವರು ವರ್ತೂರು, ಕೃಷ್ಣ ರಾಜಪುರ ಮತ್ತು ಬಿದರ ಹಳ್ಳಿ ಹೋಬಳಿಗಳನ್ನು ಸೇರಿಸಿ ಹೊಸ ತಾಲ್ಲೂಕು ರಚಿಸುವಂತೆ ಮುಖ್ಯ ಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದರು. ಬೆಂಗಳೂರು ದಕ್ಷಿಣ ತಾಲ್ಲೂಕು ವಿಸ್ತೀರ್ಣತೆಯಲ್ಲಿ ದೊಡ್ಡದಾಗಿದೆ. ಜನಸಂಖ್ಯೆಯೂ ಹೆಚ್ಚಿರುವುದರಿಂದ ಸರಕಾರದ ಸವಲತ್ತುಗಳು ಅಲ್ಲಿನ ಜನರನ್ನು ತಲುಪುತ್ತಿಲ್ಲ . ಆದ್ದರಿಂದ ಹೊಸ ತಾಲ್ಲೂಕು ರಚಿಸಬೇಕು ಎಂದು ಕೃಷ್ಣಪ್ಪ ಅವರು ಪೂರ್ವ ತಾಲ್ಲೂಕು ರಚನೆಯ ಅಗತ್ಯವನ್ನು ಮುಖ್ಯ ಮಂತ್ರಿಗಳಿಗೆ ಇದೇ ಸಂದರ್ಭದಲ್ಲಿ ವಿವರಿಸಿದರು.
(ಇನ್ಫೋ ವಾರ್ತೆ)