ಅಸಂಪ್ರದಾಯಿಕ ಮೂಲದಿಂದ ವಿದ್ಯುತ್ ಉತ್ಪಾದನೆಗೆ ಕ್ರಮ : ಪಾಟೀಲ್
ಬೆಂಗಳೂರು : ಅಸಂಪ್ರದಾಯಿಕ ವಿದ್ಯುತ್ ಮೂಲಗಳಿಂದ ವಿದ್ಯುತ್ ಉತ್ಪಾದಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಇಂಧನ ಖಾತೆ ರಾಜ್ಯ ಸಚಿವ ವೀರಕುಮಾರ್ ಪಾಟೀಲ್ ಮಂಗಳವಾರ ಇಲ್ಲಿ ಹೇಳಿದ್ದಾರೆ. ಭತ್ತ, ಶೇಂಗಾವನ್ನು ಅತಿ ಹೆಚ್ಚು ಉತ್ಪಾದಿಸುವ ರಾಯಚೂರು, ದಾವಣಗೆರೆ, ಕೊಪ್ಪಳ ಹಾಗೂ ಬೆಳಗಾವಿಗಳಲ್ಲಿ ಭತ್ತ ಹಾಗೂ ಶೇಂಗಾ ತೌಡಿನ ಬಳಕೆಯ ಮೂಲಕ ಖಾಸಗಿ ವಲಯದಲ್ಲಿ ವಿದ್ಯುತ್ ಉತ್ಪಾದಿಸಲಾಗುವುದು ಎಂದೂ ತಿಳಿಸಿದ್ದಾರೆ.
ಸ್ಥಳೀಯವಾಗಿ ದೊರಕುವ ಇಂಧನ ಮೂಲ ಬಳಸಿಕೊಂಡು ಸಣ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ಯೋಜನೆ ಇದಾಗಿದ್ದು. ಖಾಸಗಿ ವಲಯದಲ್ಲಿ ದಾವಣಗೆರೆಯಲ್ಲಿ 18 ಮೆಗಾ ವ್ಯಾಟ್, ರಾಯಚೂರಿನಲ್ಲಿ 18 ಮೆಗಾ ವ್ಯಾಟ್, ಕೊಪ್ಪಳದಲ್ಲಿ 12 ಮೆಗಾ ವ್ಯಾಟ್ ಹಾಗೂ ಬೆಳಗಾವಿಯಲ್ಲಿ 12 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲು ಗುರಿ ಹೊಂದಲಾಗಿದ್ದು, ಈ ಘಟಕಗಳು ಮಾರ್ಚ್, ಏಪ್ರಿಲ್ನಲ್ಲಿ ಆರಂಭವಾಗಲಿದೆ ಎಂದೂ ಹೇಳಿದರು.
ಸ್ಥಳೀಯವಾಗಿ ಲಭ್ಯವಿರುವ ಜೈವಿಕ ಇಂಧನ ಮೂಲ ಬಳಕೆಯಿಂದ ಸಣ್ಣ ಪ್ರಮಾಣದಲ್ಲಿ ಎಲ್ಲ ಪುರಸಭೆಗಳ ವ್ಯಾಪ್ತಿಯಲ್ಲಿ ವಿದ್ಯುತ್ ಉತ್ಪಾದಿಸಲು ಖಾಸಗಿ ಸಂಸ್ಥೆಯಾಂದು ಮುಂದೆ ಬಂದಿದೆ ಎಂದೂ ಹೇಳಿದ ಅವರು, 300 ಕೋಟಿ ರುಪಾಯಿ ವೆಚ್ಚದಲ್ಲಿ ಟಾಟಾ ಸಂಸ್ಥೆ ಸ್ಥಾಪಿಸಿರುವ 81.3 ಮೆಗಾವ್ಯಾಟ್ ಸಾಮರ್ಥ್ಯದ ಘಟಕ ಮುಂಬರುವ ಫೆಬ್ರವರಿಯಲ್ಲಿ ಕ್ರಿಯಾಶೀಲವಾಗಲಿದೆ ಎಂದರು.
ವಿದ್ಯುತ್ ಕ್ಷೇತ್ರವನ್ನು ಪುನರ್ನವೀಕರಿಸುತ್ತಿರುವ ಇಂದಿನ ಸಂದರ್ಭದಲ್ಲಿ ವಿದ್ಯುತ್ ದರ ಹೆಚ್ಚಳ ಅನಿವಾರ್ಯ ಎಂದೂ ಸಮರ್ಥಿಸಿಕೊಂಡ ಅವರು, ವಿದ್ಯುತ್ ಕ್ಷೇತ್ರದ ಅಭಿವೃದ್ಧಿಗಾಗಿ ಸರಕಾರ ವಿಶ್ವ ಬ್ಯಾಂಕ್ನಿಂದ ಸಾಲ ಸೌಲಭ್ಯ ಪಡೆದುಕೊಳ್ಳುತ್ತಿದೆ ಎಂದು ತಿಳಿಸಿದರು.