ಯಲ್ಲಮ್ಮನವಾಡಿ ಜಾತ್ರೆಯಲ್ಲಿ ಬೆತ್ತಲೆ ಸೇವೆ !
ಬೆಳಗಾವಿ : ಜಿಲ್ಲೆಯ ಕೊಕಟನೂರಿನ ಯಲ್ಲಮ್ಮನವಾಡಿಯ ಜಾತ್ರೆಯಲ್ಲಿ ನಡೆದಿದೆ ಎನ್ನಲಾದ ಅರೆ ಬೆತ್ತಲೆ ಸೇವೆ ಇಲ್ಲವೆ ಬೆತ್ತಲೆ ಸೇವೆ ಮತ್ತು ಪ್ರಾಣಿ ಬಲಿ ಪ್ರಕರಣಗಳಿಗೆ ಸಂಬಂಧಿಸಿದಂತೆ ವರದಿಯನ್ನು ಕಳುಹಿಸಿಕೊಡುವಂತೆ ಅಥಣಿಯ ತಹಶೀಲ್ದಾರರಿಗೆ ನಿರ್ದೇಶನ ನೀಡಿರುವುದಾಗಿ ಬೆಳಗಾವಿಯ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸೋಮವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಜಿಲ್ಲಾಧಿಕಾರಿ ಅತುಲ್ ಕುಮಾರ್ ತಿವಾರಿ ಅವರು, ಜಾತ್ರೆಯ ಸಂದರ್ಭದಲ್ಲಿ ದೇವದಾಸಿಯ ಆಚರಣೆಗಳು ನಡೆದ ಬಗ್ಗೆ ಮಾಹಿತಿ ದೊರೆತಿಲ್ಲ. ಆದರೆ, ರಹಸ್ಯವಾಗಿ ಈ ಜಾತ್ರೆಯಲ್ಲಿ ದೇವದಾಸಿ ಆಚರಣೆ ನಡೆಯಿತು ಎಂದು ಕೆಲವು ಮಾಧ್ಯಮಗಳಲ್ಲಿ ವರದಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರರಿಗೆ ಈ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯ ಯಾವುದೋ ಒಂದು ದೂರದ ಊರಿನಲ್ಲಿ ಅಥವಾ ಗ್ರಾಮದಲ್ಲಿ ಗೌಪ್ಯವಾಗಿ ಇಂತಹ ಆಚರಣೆಗಳು ನಡೆದರೆ ಜಿಲ್ಲಾಡಳಿತಕ್ಕೆ ತಿಳಿಯುವುದಾದರೂ ಹೇಗೆ ಎಂದು ಪತ್ರಕರ್ತರನ್ನೇ ಪ್ರಶ್ನಿಸಿದ ಅವರು, ಅಂತಹ ಆಚರಣೆ ನಡೆದಿದ್ದರೆ, ಕ್ರಮ ಕೈಗೊಳ್ಳಲಾಗುವುದು ಎಂದರು.