ಸಚಿವರ ಕಾರು ಅಪಘಾತ : 7 ಮಂದಿಗೆ ಗಾಯ
ಮೈಸೂರು : ಜಿಲ್ಲೆಯ ಬಿಳಿಕೆರೆ ಬಳಿ ನಿಂತಿದ್ದ ಟೆಂಪೋ ಒಂದಕ್ಕೆ ರಾಜ್ಯ ವಿತ್ತ ಸಚಿವ ಎಂ. ಶಿವಣ್ಣನವರ ಕಾರು ಡಿಕ್ಕಿ ಹೊಡೆದ ಪರಿಣಮವಾಗಿ ಸಚಿವರೂ ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದಾರೆ.
ಪಿರಿಯಾಪಟ್ಟಣದಲ್ಲಿ ನಡೆಯುತ್ತಿರುವ ಸುತ್ತೂರು ಶ್ರೀ ಶಿವರಾತ್ರೀಶ್ವರ ಭಗವತ್ಪಾದರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸಚಿವ ಶಿವಣ್ಣನವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ರಖರವಾದ ಸೂರ್ಯನ ಕಿರಣಗಳು ಚಾಲಕನ ಕಣ್ಣಿಗೆ ಬಿದ್ದಿದ್ದರಿಂದ ಎದುರು ನಿಂತಿದ್ದ ಟೆಂಪೊ ಕಾಣಿಸಲಿಲ್ಲ ಎಂದು ಸಚಿವರ ಆಪ್ತ ವಲಯಗಳಿಂದ ತಿಳಿದುಬಂದಿದೆ.
ಚಾಲಕ ನಂದ ಹಾಗೂ ಆಪ್ತ ಸಹಾಯಕ ಅನಂತಾಚಾರ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಟೆಂಪೋದಲ್ಲಿ ಕುಳಿದ್ದ ನಾಲ್ವರೂ ಗಾಯಗೊಂಡಿದ್ದಾರೆ. ಅಂಗರಕ್ಷಕ ಚೆಂಬಯ್ಯ ಅವರಿಗೆ ಮಾತ್ರ ಯಾವುದೇ ಗಾಯಗಳಾಗಿಲ್ಲ. ಸಚಿವ ಶಿವಣ್ಣ ಅವರು, ಇಲ್ಲಿನ ಬಿ.ಎಂ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಸಚಿವರ ಮೂಗಿನ ಮೂಳೆ ಮುರಿದಿದೆ ಎನ್ನಲಾಗಿದೆ.
ಮೈಸೂರಿಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಎಚ್. ವಿಶ್ವನಾಥ್ ಅವರು, ಆಸ್ಪತ್ರೆಗೆ ಭೇಟಿ ನೀಡಿ ಸಚಿವರ ಯೋಗಕ್ಷೇಮ ವಿಚಾರಿಸಿದರು.