ಎಳೆ ಬಿಸಿಲ ಹಾದಿಯಲ್ಲಿ ಇಬ್ಬನಿಯಾಗುವ ಮಂಜು
ಮನೆಗೆ ಬರುವ ಹೂವಾಡಗಿತ್ತಿ ಕನಕಾಂಬರ, ಮಲ್ಲಿಗೆ ಕಾಕಡ ಅಂತ ಬೊಬ್ಬೆ ಹೊಡೆಯುತ್ತಿದ್ದವಳು ಈಗ ಬರೀ ಅಮ್ಮಾ ಹೂವು... ಅಂತ ರಾಗ ಎಳೆಯುತ್ತಾಳೆ. ಆವಳ ಬುಟ್ಟಿಯಲ್ಲಿ ರುವುದು ಬರೀ ಕಾಕಡ ಮಾತ್ರ. ಮಲ್ಲಿಗೆ ಬೇಕಿದ್ದರೆ ಮಾರ್ಕೆಟ್ಗೋ, ಜಯನಗರ ಪೋರ್ತ್ ಬ್ಲಾಕ್ಗೋ ಹೋಗಿ ಹುಡುಕಾಡಬೇಕು. ಒಂದು ಮೊಳಕ್ಕೆ 8 ರೂಪಾಯಿಗೂ ಹೆಚ್ಚು ಕೊಡಬೇಕು.
ಮರಗಳೆಲ್ಲ ಬೋಳಾಗಲಾರಂಭಿಸಿವೆ. ಚಳಿ, ಎಲೆಗಳನ್ನು ಕತ್ತರಿಸಿಕೊಂಡು ಬೆಳಿಗ್ಗೆ ತಣ್ಣಗೆ ಮಂಜು ಹರಡಿಟ್ಟು ಏನೇನೂ ಗೊತ್ತಿಲ್ಲದವರ ಹಾಗೆ ಹೊರಡುತ್ತದೆ. ಮತ್ತೆ ಬರುವೆನು ರಾತ್ರಿಯಲ್ಲಿ ಎಂದು ಗುನುಗುತ್ತಾ. ಬಿಸಿಲು ಬೆಂಗಳೂರಿನ ಬಹು ಮಹಡಿ ಕಟ್ಟಡಗಳಿಗಿಂತ ಹಿಡಿ ಎತ್ತರ ಹೋದರೂ ಏಳಲಿಕ್ಕೆ ಕಂಬಳಿ ಬಿಡುವುದಿಲ್ಲ.
ಕಟಾವಿಗೆ ಬಂದ ಪೈರು, ಹಾಲು ತುಂಬಿದ ತೆನೆಗಳು, ವಲಸೆ ಬರುವ ಹಕ್ಕಿಗಳು ಎಲ್ಲವೂ ಬರಿಯ ಚಳಿಯ ಬಗ್ಗೇನೇ ಮಾತಾಡಿಕೊಳ್ಳುತ್ತಿವೆ. ನಡುವೆ ಬಂದ ಕ್ರಿಸ್ಮಸ್ - ರಂಜಾನ್ ಹಬ್ಬಗಳು ಚಳಿಗೆ ಶಾಪ ಹಾಕಲು ಸಮಯ ನೀಡುತ್ತಿಲ್ಲ. ಉಪವಾಸ ಇನ್ನೇನು ಮುಗಿಯಲಿದೆ, ಹಬ್ಬವನ್ನು ಇದಿರುಗೊಳ್ಳಬೇಕು ಎನ್ನುವ ತುರಾತುರಿಯಿಂದ ಖಾಲಿ ಹೊಟ್ಟೆಯಲ್ಲಿ ಶಾಪಿಂಗ್ ಹೋಗುವ ಮುಸ್ಲಿಮರು ಕೂಡ ಬೆಳಗ್ಗಿನ ಬಾಂಕ್ ಕೂಗುವ ಮುಂಚೆ ಏಳುತ್ತಾರೆ. ಯಾವುದೇ ಕಿರಿಕಿರಿ ಇಲ್ಲದೆ. ಈ ಬಾರಿಯ ಡಿಸೆಂಬರ್ ಚಳಿ ತಂದಿರುವ ಎರಡು ಹಬ್ಬಗಳ ಸಡಗರ ಆವರಿಸಿಕೊಳ್ಳುತ್ತಿರುವಾಗಲೇ ಹವಾಮಾನ ಇಲಾಖೆಯವರು ಮತ್ತೆ ಗುಲ್ಬರ್ಗದಲ್ಲಿ ಉಷ್ಣಾಂಶ 9ಡಿಗ್ರಿಗಿಂತ ಹಿಂದೆ (8.8) ಹಾರಿರುವ ಸುದ್ದಿ ಕಳಿಸಿದ್ದಾರೆ. ಒಣ ಹವೆ ಮತ್ತೆ ನಿಮ್ಮ ತುಟಿಗಳನ್ನು ಸೀಳೀತು. ಕೋಲ್ಡ್ ಕ್ರೀಮ್...ತೆಂಗಿನೆಣ್ಣೆಗೆಕಾಲ.