ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋಕ್ಷ ಕಂಡ ನಾಡಿಗರ ಪಂಚಭೂತಗಳು

By Staff
|
Google Oneindia Kannada News

ಬೆಂಗಳೂರು : ಪ್ರತಿಯಾಂದನ್ನೂ ನೋಟಿನ ಹಿನ್ನೆಲೆಯಲ್ಲಿ ನೋಡುವ ಪ್ರಸ್ತುತದ ಜಮಾನದ ಬಗ್ಗೆ ಹಿರಿಯ ಕವಿ ಜಿ.ಎಸ್‌. ಶಿವರುದ್ರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.

ಸುಮತೀಂದ್ರ ನಾಡಿಗರ ಪಂಚಭೂತಗಳು ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಸೋಮವಾರ ನಡೆದ ಕಾರ್ಯಕ್ರಮವನ್ನು ಭಾರತ ಯಾತ್ರಾ ಕೇಂದ್ರ ಮತ್ತು ಸಪ್ನ ಬುಕ್‌ಹೌಸ್‌ ಸಂಯುಕ್ತವಾಗಿ ಏರ್ಪಡಿಸಿದ್ದವು.

ನಾವು ಬಾಳುತ್ತಿರುವುದು ವೇದಯುಗವಲ್ಲ , ವೇಗಯುಗ ಎಂದು ಬಣ್ಣಿಸಿದ ಶಿವರುದ್ರಪ್ಪ , ಧಾವಂತದ ಯುಗದಲ್ಲಿ ಪುರುಸೊತ್ತನ್ನು ಕಳಕೊಂಡಿರುವ ಜನ ಕಷ್ಟ ಇಲ್ಲದೆ ಹಣ್ಣು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಮಹತ್ವಾಕಾಂಕ್ಷೆ , ಕನಸು ಕಳೆದುಕೊಂಡ ಕಾಲವಿದು. ಆದರೂ ಅಲ್ಲಲ್ಲಿ ಮಹತ್ವವನ್ನು ಹಿಡಿದು ತಮ್ಮ ಇಷ್ಟಕ್ಕೆ ಒಗ್ಗಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಅಂಥಾ ಒಂದು ಪ್ರಯತ್ನವೇ ನಾಡಿಗರ ಪಂಚಭೂತಗಳು ಎಂದರು.

ಸೃಷ್ಟಿ , ಪುರಾಣದ ಇನ್ನಷ್ಟು ದೇಶೀ ಕಲ್ಪನೆಗಳನ್ನು ಒಗ್ಗಿಸಿಕೊಂಡು ಕಾವ್ಯ ಬರೆದಿದ್ದರೆ ಅದು ಇನ್ನಷ್ಟು ಸತ್ವಯುತವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟ ಶಿವರುದ್ರಪ್ಪ ಕೇವಲ ವೇದ ಉಪನಿಷತ್ತುಗಳು ಮಾತ್ರ ನಮ್ಮನ್ನು ಭಾರತೀಯರನ್ನಾಗಿಸಿಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಎಸ್‌.ಆರ್‌. ಬೊಮ್ಮಾಯಿ ಪುಸ್ತಕ ಬಿಡುಗಡೆ ಮಾಡಿದರು. ಪುಸ್ತಕದ ಬಗ್ಗೆ ಮಾತನಾಡಿದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಯು.ಆರ್‌. ಅನಂತಮೂರ್ತಿ, ನಾಡಿಗರದು ಸೊಗಸಾದ ಭಾಷೆ, ಎಲ್ಲೂ ಎಡವದ ಅಚ್ಚುಕಟ್ಟುತನ, ಛಂದೋಬದ್ಧವಾದ ಲಯ ಅದರಲ್ಲಿ ಕಂಡುಬರುತ್ತದೆ ಎಂದರು. ಪರಂಪರೆಯನ್ನು ಮರೆತ ಎರಡು ಜನಾಂಗಗಳನ್ನು ಬೆಸೆಯುವ ಪ್ರಯತ್ನ ನಾಡಿಗರ ಕೃತಿ ಎಂದು ಬನ್ನಂಜೆ ಗೋವಿಂದಾಚಾರ್ಯ ಹೇಳಿದರು.

ಇದೇ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಡಾ. ರಾಮಚಂದ್ರಶರ್ಮ, ಡಾ. ಚಂದ್ರಶೇಖರ ಕಂಬಾರ,. ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ, ಪ್ರೊ.ಜಿ.ಎಸ್‌.ಸಿದ್ಧಲಿಂಗಯ್ಯ ಮುಂತಾದವರು ಭಾಗವಹಿಸಿದ್ದರು.

(ಇನ್ಪೊ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X