ಕ್ಯಾಸೆಟ್ ಡ್ರಾಮಾ ದೊರೆ ಧೀರೇಂದ್ರಗೋಪಾಲ್ ಹೃದಯಾಘಾತದಿಂದ ನಿಧನ
ಬೆಂಗಳೂರು : ಜನಪ್ರಿಯ ಸಿನಿಮಾ ನಟ ಮತ್ತು ರಂಗ ಕಲಾವಿದ ಧೀರೇಂದ್ರ ಗೋಪಾಲ್ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಸೋಮವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿತ್ತು .
ಸುಮಾರು 350 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಧೀರೇಂದ್ರಗೋಪಾಲ್ ಸಾವಿರಕ್ಕೂ ಹೆಚ್ಚು ರಂಗ ನಾಟಕಗಳಿಗಾಗಿ ಬಣ್ಣ ಹಚ್ಚಿದ್ದಾರೆ. ಮೃತರು ಪತ್ನಿ ಹಾಗೂ ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಕ್ಯಾಸೆಟ್ ನಾಟಕಗಳಿಂದಾಗಿ ಧೀರೇಂದ್ರ ಅವರು ರಾಜ್ಯಾದ್ಯಂತ ಮನೆ ಮಾತಾಗಿದ್ದರು. ತಮ್ಮ ಬಿಚ್ಚು ಹಾಗೂ ಗ್ರಾಮ್ಯ ಶೈಲಿಯ ಸಂಭಾಷಣೆಯಿಂದ ರಾಜಕಾರಣಿಗಳನ್ನು ಟೀಕಿಸುತ್ತಿದ್ದ ಧೀರೇಂದ್ರ, ಮಾಸ್ಟರ್ ಹಿರಣ್ಣಯ್ಯನವರೊಂದಿಗೆ ಧ್ವನಿಸುರುಳಿ ನಾಟಕಗಳ ನಾಯಕ ಪಟ್ಟ ಗಳಿಸಿದ್ದರು. ಇತ್ತೀಚೆಗೆ ರಾಜ್ ಅಪಹರಣದ ಸಂದರ್ಭದಲ್ಲಿ ನರಹಂತಕ ವೀರಪ್ಪನ್ನನ್ನು ಟೀಕಿಸುವ ಹಾಗೂ ರಾಜ್ರ ಅನನ್ಯತೆಯನ್ನು ಬಣ್ಣಿಸುವ ವಿಷಯವನ್ನೊಳಗೊಂಡ ಅವರ ಮೂರು ಕ್ಯಾಸೆಟ್ಗಳು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿಯಾಗಿದ್ದವು. ಗೌಡ್ರಗದ್ಲ , ಬಂಡಲ್ ನನ್ಮಗ ಸೇರಿದಂತೆ ಸುಮಾರು 350 ಕ್ಕೂ ಹೆಚ್ಚು ನಾಟಕಗಳಿಗಾಗಿ ಅವರು ಧ್ವನಿಸುರುಳಿಗಳಿಗೆ ಜೀವ ತುಂಬಿದ್ದಾರೆ.
ಸುಭದ್ರಾ ಕಲ್ಯಾಣದ ಚಿಕ್ಕ ಪಾತ್ರವೊಂದರಿಂದ ಸಿನಿಮಾ ರಂಗ ಪ್ರವೇಶಿಸಿದ ಧೀರೇಂದ್ರ, ನಂತರದಲ್ಲಿ ಅನೇಕ ಚಿತ್ರಗಳ ಖಳನಾಯಕ ಪಾತ್ರಗಳಲ್ಲಿ ಮಿಂಚಿದ್ದರು. ನಾಗರಹಾವು, ನಾಗ ಕಾಳ ಭೈರವ, ರಕ್ತ ತಿಲಕ, ಗಜಪತಿ ಗರ್ವಭಂಗ, ಅಣ್ಣಯ್ಯ ಅವರು ಅಭಿನಯಿಸಿದ ಕೆಲವು ಪ್ರಮುಖ ಚಿತ್ರಗಳು. ಇನ್ನೂ ತೆರೆಕಾಣದ ಅಂಜಲಿ ಗೀತಾಂಜಲಿ ಅವರ ಕೊನೆ ಚಿತ್ರ. ಇತ್ತೀಚೆಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾಗಿದ್ದ ಕಾರಣ, ಕಿರುತೆರೆ ಧಾರಾವಾಹಿಗಳಲ್ಲಿ ಧಿ ೕರೇಂದ್ರಗೋಪಾಲ್ ನಟಿಸುತ್ತಿದ್ದರು.
(ಯುಎನ್ಐ)