ಸಾರ್ವಜನಿಕ ಸಭೆಯಲ್ಲಿ ಧನಂಜಯ ಕುಮಾರ್- ದೇಶಪಾಂಡೆ ಕೋಳಿ ಜಗಳ
ಮಂಗಳೂರು : ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಡುವಿನ ತಪ್ಪಿದ ತಾಳದ ಕತೆ ಮುಖ್ಯಮಂತ್ರಿಗಳ ಎದುರೇ ಪ್ರದಶಂನಗೊಂಡ ಘಟನೆ ಇಲ್ಲಿ ನಡೆಯಿತು.
ಮಂಗಳೂರು ವಿಮಾನ ನಿಲ್ದಾಣ ವಿಸ್ತರಣ ಕಾಮಗಾರಿಗೆ ಅಗತ್ಯ ಭೂಮಿಯನ್ನು ರಾಜ್ಯ ಸರಕಾರ ಇನ್ನೂ ಕೇಂದ್ರ ಸರಕಾರಕ್ಕೆ ಹಸ್ತಾಂತರಿಸಿಲ್ಲ ಎಂದು ಕೇಂದ್ರ ಸಚಿವ ಧನಂಜಯ ಕುಮಾರ್ ಹೇಳಿದ್ದಕ್ಕೆ ರಾಜ್ಯದ ಭಾರಿ ಮತ್ತು ಮದ್ಯಮ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಆಕ್ಷೇಪ ವ್ಯಕ್ತಪಡಿಸಿ ಕೇಂದ್ರ ಸರಕಾರ ಬೇಕಿದ್ದರೆ ನಾಳೆಯೇ ಭೂಮಿಯನ್ನು ವಶಕ್ಕೆ ತೆಗೆದುಕೊಂಡು ಕಾಮಗಾರಿ ಆರಂಭಿಸಬಹುದು ಎಂದು ಬಿರುಸಾಗಿ ಹೇಳಿದ ಘಟನೆ ಮುಖ್ಯ ಮಂತ್ರಿಗಳ ಸಮ್ಮುಖದಲ್ಲಿಯೇ ನಡೆಯಿತು.
ಶುಕ್ರವಾರ ಮಂಗಳೂರಿನ ಪುರಭವನದಲ್ಲಿ ಕರ್ನಾಟಕ ನಗರಾಭಿವೃದ್ಧಿ ಮತ್ತು ಕರಾವಳಿ ಪರಿಸರ ನಿರ್ವಹಣಾ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಧನಂಜಯ ಕುಮಾರ್ ರಾಜ್ಯ ಸರಕಾರವು ಮಂಗಳೂರು ವಿಮಾನನಿಲ್ದಾಣ ವಿಸ್ತರಣೆಗೆ ಅಗತ್ಯವಾದ ಭೂಮಿಯನ್ನು ಇನ್ನು ಕೇಂದ್ರ ಸರಕಾರಕ್ಕೆ ಹಸ್ತಾಂತರಿಸದಿರುವುದರಿಂದ ವಿಸ್ತರಣಾ ಕಾಮಗಾರಿ ವಿಳಂಬವಾಗಿದೆ ಎಂದರು.
ತಮ್ಮ ಸರದಿ ಬಂದಾಗ ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ದೇಶಪಾಂಡೆ, ಮಂಗಳೂರು ವಿಮಾನ ನಿಲ್ದಾಣ ವಿಸ್ತರಣೆಗಾಗಿ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಬಿಟ್ಟು ಹೋಗಲು ಅಲ್ಲಿ ಯ ನಿವಾಸಿಗಳು ಸಿದ್ದರಿರಲಿಲ್ಲ . ಅವರು ಹೆಚ್ಚುವರಿ ಪರಿಹಾರ ಕೇಳುತ್ತಿದ್ದರು. ಒಂದುವರೆ ವರ್ಷದ ಹಿಂದೆ ರಾಜ್ಯ ಸರಕಾರ 5.5 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ನಿರ್ವಸಿತರಿಗಾಗಿ ಪುನರ್ವಸತಿ ಪೂರ್ಣಗೊಂಡಿದೆ. ಕೇಂದ್ರ ಸರಕಾರ ನಾಳೆಯೇ ಜಮೀನು ವಶಕ್ಕೆ ತೆಗೆದುಕೊಂಡು ಕೆಲಸ ಆರಂಭಿಸಬಹುದು ಎಂದು ಹೇಳಿದರು. ಸಮಾರಂಭದಲ್ಲಿ ಮಾತನಾಡಿದ ನೀರಾವರಿ ಸಚಿವ ಎಚ್.ಕೆ. ಪಾಟೀಲ್ ವಿಶ್ವಬ್ಯಾಂಕ್ 2000 ಕೋಟಿ ರೂಪಾಯಿ ಸಾಲವನ್ನು ರಾಜ್ಯ ಸರಕಾರಕ್ಕೆ ನೀಡಲು ಮುಂದೆ ಬಂದಿದೆ. ಇದು ರಾಜ್ಯ ಸರಕಾರದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಮಂತ್ರಿ ಎಸ್.ಎಂ. ಕೃಷ್ಣ ಕಾಮಗಾರಿಗಳ ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದು ಸಲ್ಲ ಎಂದರು. ಆದರೆ, ಕೇಂದ್ರ ಹಾಗೂ ರಾಜ್ಯಮಂತ್ರಿಗಳ ಕೋಳಿ ಜಗಳದ ಬಗ್ಗೆ ಅವರು ಏನನ್ನೂ ಹೇಳುವ ಗೋಜಿಗೆ ಹೋಗಲಿಲ್ಲ .
(ಮಂಗಳೂರು ಪ್ರತಿನಿಧಿಯಿಂದ)