ಕಿರುಕುಳ ನೀಡುವ ಕೆಪಿಟಿಸಿಎಲ್ಗೆ ದರ ಪಾವತಿ ಇಲ್ಲ
ದೊಡ್ಡ ಬಳ್ಳಾಪುರ : ರೈತರ ಪಂಪ್ಸೆಟ್ಗಳಿಗೆ ಯದ್ವಾತದ್ವಾ ವಿದ್ಯುತ್ ದರ ವಿಧಿಸಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಕ್ರಮವನ್ನು ವಿರೋಧಿಸಿ ತಾಲ್ಲೂಕಿನ ಸಾವಿರಾರು ರೈತರು ಇತ್ತೀಚೆಗೆ ಕರ ನಿರಾಕರಣ ಚಳವಳಿ ಹಮ್ಮಿಕೊಂಡಿದ್ದರು.
ರಾಜ್ಯ ರೈತಸಂಘ ಚಳವಳಿಗೆ ವೇದಿಕೆ ಕಲ್ಪಿಸಿತ್ತು . ರೈತ ಸಂಘದ ಅಧ್ಯಕ್ಷ ಪ್ರೊ. ನಂಜುಂಡಸ್ವಾಮಿ ರೈತರನ್ನುದ್ದೇಶಿಸಿ ಮಾತನಾಡಿದರು. ಕೆಪಿಟಿಸಿಎಲ್ ರೈತರಿಗೆ ನೀಡುತ್ತಿರುವುದು ವಿದ್ಯುತ್ ಅಲ್ಲ , ಕಿರುಕುಳ ಎಂದು ಬಣ್ಣಿಸಿದ ಅವರು, ಕಿರುಕುಳಕ್ಕೆ ಕರ ಪಾವತಿಸುವುದು ಸಾಧ್ಯವಿಲ್ಲ ಎಂದರು. ಸರಿಯಾಗಿ ಮೂರು ಗಂಟೆಯೂ ವಿದ್ಯುತ್ ನೀಡದ ಕೆಪಿಟಿಸಿಎಲ್ಗೆ ಶುಲ್ಕ ವಿಧಿಸುವ ಹಕ್ಕಿಲ್ಲ . ದರ ವಿಧಿಸುವ ಕುರಿತು ರಾಜ್ಯಾದ್ಯಂತ ಚಳವಳಿ ನಡೆಸಲಾಗುವುದು ಎಂದು ನಂಜುಂಡಸ್ವಾಮಿ ಉತ್ತರಿಸಿದರು.
ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಟಿ. ಗಂಗಾಧರ್ ಹಾಗೂ ರೈತ ಸಂಘದ ಮುಖಂಡರಾದ ಡಾ. ವೆಂಕಟರೆಡ್ಡಿ, ನಾಗಸಂದ್ರ ಭದ್ರಣ್ಣ, ತಿಪ್ಪೂರು ಮುದ್ದೇಗೌಡ ಮುಂತಾದವರು ರೈತರನ್ನುದ್ದೇಶಿಸಿ ಮಾತನಾಡಿ, ವಿದ್ಯುತ್ ದರ ಪಾವತಿಸದಿರುವಂತೆ ರೈತರಿಗೆ ಕರೆ ನೀಡಿದರು.
(ಇನ್ಫೊ ವಾರ್ತೆ)