ಜಾಗತೀಕರಣ ಜಾದು : ಮಾಂಸ- ಕೆಜಿಗೆ 25 ರು,ಹಾಲು- ಲೀ.ಗೆ 6 ರು
ಸಕಲೇಶಪುರ : ಚೀನಾ ಮತ್ತು ಜಪಾನಿನಲ್ಲಿ -ಒಂ-ದು ಹೆಕ್ಟೇರ್ ಜಾಗೆಯಲ್ಲಿ ಶೇ. 60ರಷ್ಟು ಆಲೂಗಡ್ಡೆ, ಟೊಮೆಟೋ ಇಳುವರಿ ದೊರೆಯುತ್ತಿದ್ದರೆ ನಮ್ಮ ದೇಶದಲ್ಲಿ ಹೆಕ್ಟೇರ್ಗೆ ಕೇವಲ ಶೇ.20ರಷ್ಟು ಇಳುವರಿ ಆಗುತ್ತಿದೆ. ಆ ದೇಶಗಳಲ್ಲಿ ಕೃಷಿ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಹಾಗಾಗಿ ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿದೆ. ಜೊತೆಗೆ ವಿದೇಶಗಳಿಗೆ ರಫ್ತು ಮಾಡಿ, ಆ ದೇಶಗಳ ಬೆಲೆಗಳಿಗಿಂತ ಅಗ್ಗವಾಗಿ ಮಾರಲು ಸಾಧ್ಯವಾಗಿದೆ. ಈ ಜಾಗತೀಕರಣ ಪ್ರಕ್ರಿಯೆ ಕಾರಣ ಭಾರತದ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ.
ತಾಲ್ಲೂಕಿನ ದೋಣಗಾಲಿನ ಸಾಂಬಾರ ಮಂಡಳಿ ಗುರುವಾರ ಆಯೋಜಿಸಿದ್ದ ಹೆಚ್ಚು ಸಾಂಬಾರ ಪದಾರ್ಥ ಬೆಳೆದ ರೈತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಂಬಾರ ಮಂಡಳಿ ಸದಸ್ಯ ಕೆ.ಬಿ.ಚಂದ್ರಶೇಖರ್ ಆಡಿದ ಮಾತುಗಳಿವು. ಭಾರತದ ಮಾರುಕಟ್ಟೆಗೆ ವಿಯಟ್ನಾಂ ಕರಿ ಮೆಣಸು ಬಂದಿಳಿಯುತ್ತಿದೆ. ಸಾಲದ್ದಕ್ಕೆ ಆಸ್ಟ್ರೇಲಿಯಾದಿಂದ ಅಗ್ಗದ ಬೆಲೆಯ ಕುರಿ ಮಾಂಸ ಆಮದಾಗುತ್ತಿದ್ದು, ಕೆ.ಜಿ.ಗೆ ಕೇವಲ 25 ರುಪಾಯಿಗೆ ಬಿಕರಿಯಾಗುವ ಸಾಧ್ಯತೆಯಿದೆ. ಜಾಗತೀಕರಣದಿಂದ ಆಗುತ್ತಿರುವ ಈ ಬದಲಾವಣೆಗಳನ್ನು ನೋಡಿದರೆ ಇನ್ನು ಕೆಲವೇ ದಿನಗಳಲ್ಲಿ ಆರೇ ರುಪಾಯಿಗೆ ಒಂದು ಲೀಟರ್ ಹಾಲು ದೊರೆಯಲಿದೆ. ಹೀಗಾ-ದ-ಲ್ಲಿ ನಮ್ಮ ರೈತನ ಗತಿ ಏನು, ನಮ್ಮ ಕೃಷಿ ಉತ್ಪನ್ನಗಳನ್ನು ಏನು ಮಾಡಬೇಕು ಎಂದು ಚಂದ್ರಶೇಖರ್ ಪ್ರಶ್ನಿಸಿದರು.
ಹಿಂದೆ ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾತ್ರ ಬೆಳೆಯುತ್ತಿದ್ದ ಕಾಫಿ ಬೆಳೆ ಈಗ ಹುಬ್ಬಳ್ಳಿ, ಮಂಡ್ಯ, ಧಾರವಾಡ, ಹಿರಿಯೂರುಗಳಂತಹ ಬಯಲು ಪ್ರದೇಶಗಳಲ್ಲೂ ಕಾಣುತ್ತಿದೆ. ಸುಮಾರು 60 ಲಕ್ಷ ಜನ ಕಾಫಿ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ರಾಜರಂತಿದ್ದ ಕಾಫಿ ಉದ್ಯಮಿಗಳ ಸ್ಥಿತಿ ಇವತ್ತು ಚಿಂತಾಜನಕವಾಗಿದೆ. ಮತ್ತೆ ಅದೇ ಜಾಗತೀಕರಣದ ಏಟು. ಉತ್ಪಾದನಾ ವೆಚ್ಚ ತಪ್ಪಿಸಿ, ಅಧಿಕ ಇಳುವರಿ ಪಡೆಯುವ ವಿಧಾನದ ಬಗೆಗ ಸಂಶೋಧನೆ ನಡೆದಿದೆ ಎಂದು ಸಮಾರಂಭದಲ್ಲಿ ಮಾತನಾಡಿದ ತೋಟಗಾರಿಕಾ ಸಚಿವ ಅಲ್ಲಂ ವೀರಭದ್ರ-ಪ್ಪ ತಿಳಿಸಿದರು.
ಪ್ರಶಸ್ತಿ ಪಡೆದ ರೈತರು : 1998-----99, 1999-- 2000 ಸಾಲಿನಲ್ಲಿ ಅಧಿಕ ಏಲಕ್ಕಿ ಬೆಳೆದ ಕೇರಳದ ಎಂ.ವಿ.ಕುರಿಯನ್, ಚಾಕೋ ವರ್ಗಿಸ್, ಜಾರ್ಜ್ ಆ್ಯಂಟನಿ, ಪ್ರೊ.ಜೋಸೆಫ್ ಜಾನ್, ಕೊಡಗಿನ ಸಿ.ಡಿ.ಪ್ರಸಾದ್, ಪಿ.ಎಂ.ನಂಜಪ್ಪ ಹಾಗೂ ತಮಿಳುನಾಡಿನ ಎಲ್.ರಾಮಯ್ಯ ಪ್ರಶಸ್ತಿ ಸ್ವೀಕರಿಸಿದರು.
ಹೆಚ್ಚು ವೆನಿಲ್ಲಾ ಬೆಳೆದದ್ದಕ್ಕಾಗಿ ಶಿವಮೊಗ್ಗೆಯ ಕೆ.ಎಸ್.ಶೇಷಾದ್ರಿ ಹಾಗೂ ಶಾಂತಮ್ಮ ಪಿ.ರಾವ್, ಆಲ್ದೂರಿನ ಜಾವೆದ್ ಆಸ್ಕರ್, ಕೇರಳದ ಎಂ.ವಿ. ಸಯೋರ ಮತ್ತು ಒರಿಸ್ಸಾದ ಪಿ.ಸಿ.ಪಟ್ನಾಯಕ್ ಪ್ರಶಸ್ತಿ ಪಡೆದರು.
ಬಾಲಂಗೋಚಿ : ನಮ್ಮ ರೈತರಲ್ಲಿ ಮೊದಲು ಜಾಗತೀಕರಣದ ಬಗೆಗೆ ಜಾಗೃತಿ ಮೂಡಿಸಬೇಕು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಾವಿದ್ದೇವೆ ಎಂಬುದನ್ನು ಮನಗಾಣಿಸಬೇಕು. ಇಲ್ಲವಾದಲ್ಲಿ ನಮ್ಮಲ್ಲಿ ಇಳುವರಿಯೇ ನಿಂತೀತು !
(ಇನ್ಫೋ ವಾರ್ತೆ)