1 ಕೋಟಿ 10ಲಕ್ಷ ಶಾಲಾ ಮಕ್ಕಳಿಗೆ ವಿನೂತನ ಗುಂಪುವಿಮಾ ಯೋಜನೆ
ಬೆಂಗಳೂರು : ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ ಶಾಲಾ ಮಕ್ಕಳಿಗೆ ಗುಂಪು ವಿಮಾ ಯೋಜನೆಯನ್ನು ಆರಂಭಿಸಲಾಗುವುದು ಎಂದು ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವನಾಥ್ ತಿಳಿಸಿದ್ದಾರೆ.
ಈ ಯೋಜನೆಯ ಲಾಭವನ್ನು ರಾಜ್ಯಾದ್ಯಂತ ಇರುವ ಸುಮಾರು 1ಕೋಟಿ 10 ಲಕ್ಷ ಮಕ್ಕಳು ಪಡೆಯಲಿದ್ದು, ಮಕ್ಕಳಿಗೆ ತಲಾ 1 ರುಪಾಯಿಯಂತೆ ಪ್ರೀಮಿಯಂ ಕಟ್ಟಬೇಕಾಗುತ್ತದೆ. ಇದರಲ್ಲಿ ಅರ್ಧವನ್ನು ರಾಜ್ಯ ಸರಕಾರವೂ ಉಳಿದರ್ಧವನ್ನು ರೋಟರಿಯಂತಹ ಸ್ವಯಂ ಸೇವಾ ಸಂಸ್ಥೆಗಳು ಭರಿಸಲಿವೆ ಎಂದು ಅವರು ತಿಳಿಸಿದರು.
ಬೇರೆ ಯಾವುದೇ ರಾಜ್ಯದಲ್ಲಿ ಇಲ್ಲದ ಈ ವಿನೂತನ ಕಲ್ಪನೆ ಜಾರಿಗೆ ಬಂದಲ್ಲಿ ಕರ್ನಾಟಕ ವಿಶ್ವಕ್ಕೆ ಮಾದರಿಯಾಗಲಿದೆ ಎಂದ ಅವರು, ಯಾವುದೇ ಕಾರಣಕ್ಕಾಗಿಯಾದರೂ ವಿದ್ಯಾರ್ಥಿ ಮೃತಪಟ್ಟಲ್ಲಿ ಅವರ ಪಾಲಕರಿಗೆ 25 ಸಾವಿರ ರುಪಾಯಿಗಳ ಪರಿಹಾರ ನೀಡಲಾಗುತ್ತದೆ. ವಿದ್ಯಾರ್ಥಿ ತೀವ್ರತರವಾಗಿ ಗಾಯಗೊಂಡಾಗಲೂ ಸೂಕ್ತ ಪರಿಹಾರವನ್ನು ಈ ಗುಂಪು ವಿಮಾ ಯೋಜನೆಯಡಿ ನೀಡಲಾಗುವುದು ಎಂದು ಅವರು ಹೇಳಿದರು. ಈ ಯೋಜನೆಯ ಪರಿಣಾಮವಾಗಿ ಶಾಲೆಗಳಲ್ಲಿ ಹಾಜರಾತಿ ಸಂಖ್ಯೆ ಹೆಚ್ಚಲಿದೆ ಎಂಬ ಆಶಾಭಾವನೆಯನ್ನೂ ಅವರು ವ್ಯಕ್ತಪಡಿಸಿದರು.
ಜುಲೈ 1ರಿಂದ ಶಾಲೆಗಳು ಆರಂಭವಾಗುವ ಮೊದಲೇ ಪ್ರೋಗ್ರೆಸ್ ಕಾರ್ಡ್, ಸಮವಸ್ತ್ರ ಹಾಗೂ ಉಚಿತ ಪಠ್ಯ ಪುಸ್ತಕ ವಿತರಣೆಗೆ ಕೂಡ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕ್ರಿಯೆ ಆಗಲೇ ಆರಂಭಗೊಂಡಿದ್ದು, ಸರಕಾರ ಈ ಬಾರಿ ಪುಸ್ತಕ ವಿತರಣೆಯಲ್ಲಿ ವಿಳಂಬವಾಗದಂತೆ ಎಚ್ಚರವಹಿಸಲಿದೆ ಎಂದೂ ತಿಳಿಸಿದರು.