ಅಕ್ಷರ ದೀಪ ಹಿಡಿದ ವಾಜಪೇಯಿ ! ಹತ್ತು ವರ್ಷದಲ್ಲಿ ದೇಶದೊಳಗೆಲ್ಲ ಬೆಳಗು ?
*ದೀಪ್ಷಿಕಾ ಘೋಷ್
ನವದೆಹಲಿ : 2010 ರೊಳಗೆ ದೇಶದ ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡುವ ಸರ್ವ ಶಿಕ್ಷಾ ಅಭಿಯಾನ ಎನ್ನುವ ರಾಷ್ಟ್ರೀಯ ಕಾರ್ಯಾಚರಣೆಯನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದ್ದು, ಪ್ರಧಾನಿ ವಾಜಪೇಯಿ ಅಭಿಯಾನದ ನೇತೃತ್ವವನ್ನು ವಹಿಸುವರು.
ಕೇಂದ್ರ ಮಾನವ ಸಂಪನ್ಮೂಲ ಸಚಿವ ಮುರುಳಿ ಮನೋಹರ ಜೋಷಿ ಅವರು ತಮ್ಮ ಸಚಿವಾಲಯಕ್ಕೆ ಸಂಬಂಧಿಸಿದ ಸಂಸತ್ತಿನ ಸಲಹಾ ಸಮಿತಿಯನ್ನು ಉದ್ದೇಶಿಸಿ ಗುರುವಾರ ಮಾತನಾಡುತ್ತಿದ್ದ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು. ಅಭಿಯಾನಕ್ಕೆ ಸಂಬಂಧಿಸಿದ ಪ್ರಕಟಣೆಯನ್ನು ಸದ್ಯದಲ್ಲೇ ಹೊರಡಿಸಲಾಗುವುದು. ಸಂಸದರು, ರಾಜ್ಯಗಳ ವಿದ್ಯಾ ಮಂತ್ರಿಗಳು, ಶೈಕ್ಷಣಿಕ ತಜ್ಞರನ್ನು ಒಳಗೊಂಡಿರುವ ಅಭಿಯಾನದ ಪ್ರಚಾರ ಸಮಿತಿಗೆ ತಾವು ಉಪಾಧ್ಯಕ್ಷರು ಎಂದು ಜೋಷಿ ತಿಳಿಸಿದರು.
6 ರಿಂದ 12 ವರ್ಷ ವಯೋಮಿತಿಯ ಎಲ್ಲಾ ಮಕ್ಕಳನ್ನು 2003 ರೊಳಗೆ ಶಾಲೆಗೆ ಸೇರಿಸಲು ಪ್ರಯತ್ನಿಸಲಾಗುವುದು. 2007 ರೊಳಗೆ ಪ್ರಾಥಮಿಕ ಶಿಕ್ಷಣದ ಗುರಿ ಸಾಧಿಸುವುದರೊಂದಿಗೆ 2010 ರ ಸರ್ವರಿಗೂ ಶಿಕ್ಷಣ ಎನ್ನುವ ಜಾಗತಿಕ ಗುರಿಯನ್ನು ಮುಟ್ಟಲಾಗುವುದು. ಈ ಉದ್ದೇಶಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 600 ಬಿಲಿಯನ್ ರು. ಗಳನ್ನು ತಮ್ಮ ಆಯವ್ಯಯದಲ್ಲಿ ವೆಚ್ಚ ಮಾಡುವ ಅಂದಾಜಿದೆ ಎಂದರು.
ಸಂವಿಧಾನದಲ್ಲಿರುವ ಅನುಚ್ಛೇದ 45 ರ ಪ್ರಕಾರ 14 ವರ್ಷದವರೆಗೆ ಎಲ್ಲಾ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಇದನ್ನು 1968 ಹಾಗೂ 1986 ರ ಶೈಕ್ಷಣಿಕ ನೀತಿಗಳಲ್ಲಿ ಎತ್ತಿ ಹಿಡಿಯಲಾಗಿದ್ದರೂ ಪ್ರಾಥಮಿಕ ಶಿಕ್ಷಣವನ್ನು ಎಲ್ಲಾ ಮಕ್ಕಳು ಈವರೆಗೆ ಪಡೆಯಲಾಗಿಲ್ಲ . ಅಕ್ಷರತೆಯಲ್ಲೂ ಲಿಂಗ ತಾರತಮ್ಯ ತಲೆದೋರುತ್ತಿದೆ. ಎಷ್ಟೋ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ನಮ್ಮ ಹಿಂದಿನ ಸರ್ಕಾರಗಳು ಶಿಕ್ಷಣವನ್ನು ಕಡೆಗಣಿಸಿದ್ದೇ ಕಾರಣ ಎಂದು ಸಚಿವರು ವಿಷಾದಿಸಿದರು.
ಸರ್ಕಾರದ ಸರ್ವ ಶಿಕ್ಷ ಕಾರ್ಯಕ್ರಮದ ಪ್ರಕಾರ, ಪ್ರತಿ 40 ಮಕ್ಕಳಿಗೆ ಒಬ್ಬ ಶಿಕ್ಷಕ ಹಾಗೂ ಶಾಲೆಗೆ ಕನಿಷ್ಟ ಇಬ್ಬರು ಶಿಕ್ಷಕರು ಇರುವಂತೆ ನೋಡಿಕೊಳ್ಳಲಾಗುತ್ತದೆ. ಅದೇ ರೀತಿ ಪ್ರತಿ ಪ್ರಾಂತ್ಯದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಒಂದು ಪ್ರಾಥಮಿಕ ಶಾಲೆ ಇರುತ್ತದೆ.
ಪ್ರಸಕ್ತ ಹಣಕಾಸಿನ ವರ್ಷದಲ್ಲೇ ಸರ್ವ ಶಿಕ್ಷ ಅಭಿಯಾನವನ್ನು ಹಮ್ಮಿಕೊಳ್ಳಲು ಎಲ್ಲಾ ಸಿದ್ಧತೆಗಳೂ ನಡೆದಿವೆ. ಹೆಣ್ಣು ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಅನಕ್ಷರಸ್ಥರಾಗಿರುವ ಜಿಲ್ಲೆಗಳಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಜೋಷಿ ತಿಳಿಸಿದ್ದಾರೆ.
ಬಾಲಂಗೋಚಿ : ರಥಯಾತ್ರೆಗಳಲ್ಲೆ ತಮ್ಮ ಬಹುತೇಕ ಸಮಯ ಕಳೆದಿರುವ ಜೋಷಿ ಹಾಗೂ ಅವರ ಸರ್ಕಾರ ಈಗ ಆಕ್ಷರ ದೀಪ ಬೆಳಗಲು ಹೊರಟಿದೆ. ಐದು ದಶಕಗಳಲ್ಲಿ ಸಾಧಿಸಲಾಗದ್ದನ್ನು ಅವರು ದಶಕವೊಂದರಲ್ಲಿ ಮುಟ್ಟಿಯಾರೆ?
(ಐಎಎನ್ಎಸ್)