ದೀನ ದಲಿತರಿಗೆ ಈ ಬಾರಿ ನೀವೇ ಸಂತಾಕ್ಲಾಸ್ ಆಗಬಹುದು
ಕನ್ನಡಇನ್ಪೋ ವಿಶೇಷ
ತ್ಯಾಗ, ದಾನದ ಸಂಕೇತವಾದ ಕ್ರಿಸ್ಮಸ್ ಕ್ರೆೃಸ್ತ ಧರ್ಮೀಯರಿಗೆ ಬಹು ದೊಡ್ಡ ಹಬ್ಬ. ಏಸು ಕ್ರಿಸ್ತನು ಶಿಶುವಾಗಿ ಅವತರಿಸಿದ ದಿನ. ಈ ಹಬ್ಬವನ್ನು ವಿಶ್ವಾದ್ಯಂತ ಕ್ರೆೃಸ್ತ ಧರ್ಮೀಯರು ಆಚರಿಸುತ್ತಾರೆ. ಕ್ರಿಸ್ಮಸ್ಗೆ ತಿಂಗಳ ಮುಂಚೆಯೇ ಸಿದ್ಧತೆಗಳೂ ಆರಂಭ. ಕ್ರಿಸ್ಮಸ್ ಗೀತೆಗಳು ಎಲ್ಲೆಡೆ ಕೇಳಿಬರುತ್ತವೆ.
ಕ್ರಿಸ್ಮಸ್ ಮರದ ನಿರ್ಮಾಣ ಕಾರ್ಯವೂ ಭರದಿಂದ ಸಾಗಿರುತ್ತದೆ. ಮನೆಗಳೆಲ್ಲ ಸುಣ್ಣ - ಬಣ್ಣದಿಂದ ಸಿಂಗರಿಸಲ್ಪಡುತ್ತವೆ. ಹಿಂದೂಗಳ ಮನೆಯ ಮುಂದೆ ದೀಪಾವಳಿಯಲ್ಲಿ ಆಕಾಶಬುಟ್ಟಿಗಳು ಹಾರಾಡುವಂತೆ, ಕ್ರೆೃಸ್ತ ಮತದವರು ತಮ್ಮ ಮನೆಗಳ ಮುಂದೆ ನಕ್ಷತ್ರದಾಕಾರದ ಆಕಾಶ ಬುಟ್ಟಿಗಳನ್ನು ಏರಿಸುತ್ತಾರೆ. ಕ್ರಿಸ್ತನ ಅವತಾರ ಸೂಚಕವಾಗಿ ಆ ದಿನ ಆಗಸದಲ್ಲಿ ಕಂಡು ಬಂದ ಪ್ರಕಾಶಮಾನವಾದ ನಕ್ಷತ್ರದ ಪ್ರತಿರೂಪವನ್ನು ಹಾರಿಸುವುದು . ಸಂಪ್ರದಾಯ. ಕ್ರಿಸ್ಮಸ್ ವೃಕ್ಷವನ್ನು ನಕ್ಷತ್ರಗಳಿಂದ ಅಲಂಕರಿಸಿ ಪೂಜಿಸುತ್ತಾರೆ.
ಕೇಕ್ ಇಲ್ಲದೆ ಕ್ರಿಸ್ಮಸ್ ಸಾಧ್ಯವೇ? : ಕ್ರಿಸ್ಮಸ್ಗಾಗಿಯೇ ವಿನೂತನ ಮಾದರಿಯ, ಹೊಸ ಶೈಲಿಯ ಹಾಗೂ ಹೊಸ ರುಚಿಯ ಕೇಕ್ಗಳನ್ನು ತಯಾರಿಸುತ್ತಾರೆ. ಕೇಕಿಲ್ಲದೆ ಕ್ರಿಸ್ಮಸ್ ನಡೆಯಲು ಸಾಧ್ಯವೇ ಇಲ್ಲ. ಮಕ್ಕಳಿಗೆ ಕ್ರಿಸ್ಮಸ್ ಎಂದರೇ ಬಲು ಪ್ರೀತಿ. ಒಂದು ವಾರಗಳ ಕಾಲ ರಜೆಯ ಮಜ. ಮಿಗಿಲಾಗಿ ಕ್ರಿಸ್ಮಸ್ ಹಿಂದಿನ ರಾತ್ರಿ ಅಂದರೆ, 24ರ ಮಧ್ಯರಾತ್ರಿ ಮಕ್ಕಳು ಮಲಗಿದ್ದಾಗ ಸಂತಾಕ್ಲಾಸ್ ಎಂಬ ವಯೋವೃದ್ಧ ಬೆಚ್ಚನೆಯ ಬಟ್ಟೆ ತೊಟ್ಟು, ತಲೆಯ ಮೇಲೊಂದು ಟೊಪ್ಪಿಗೆ ಇಟ್ಟು , ಹೆಗಲ ಮೇಲೊಂದು ಭಾರಿ ಬ್ಯಾಗನ್ನು ಹೊತ್ತು ಸಂತಸ, ಆಟಿಕೆ, ಹೊತ್ತು ಬರುವನೆಂದೂ, ತಮ್ಮ ಎಲ್ಲ ಕೋರಿಕೆಗಳನ್ನೂ ತೀರಿಸುವನೆಂದು ಮಕ್ಕಳು ನಂಬಿದ್ದಾರೆ.
ಸಂತಾಕ್ಲಾಸ್ : ಸಂತಾಕ್ಲಾಸನ ಆಗಮನವನ್ನು ಮಕ್ಕಳು ನಂಬುವಂತೆ ಮಾಡಲು, ಕೆಲವು ಪಾಲಕರು ತಮ್ಮ ಮಕ್ಕಳ ತಲೆ ದಿಂಬಿನ ಹಿಂದೆ ಬೆಲೂನ್ಗಳನ್ನು, ಸಿಹಿಯ ಡಬ್ಬಿ ಹಾಗೂ ಹೊಸ ವಸ್ತ್ರಗಳನ್ನು ಇಡುವುದೂ ಉಂಟು. ತಮ್ಮ ಮಕ್ಕಳು ದೇವರನ್ನು ನಂಬಲಿ, ಸತ್ಕಾರ್ಯಗಳನ್ನು ಮಾಡಲಿ, ದೇವರ ಭಯದಿಂದಲಾದರೂ ಸತ್ ಪ್ರಜೆಗಳಾಗಿ ಬಾಳಲಿ ಎಂಬುದೇ ಈ ಆಚರಣೆಯ ಹಿಂದಿನ ಉದ್ದೇಶ.
ಕೇಕ್ ಪ್ರದರ್ಶನ : ಕ್ರಿಸ್ಮಸ್ ಆಚರಣೆ ನಾಲ್ಕಾರು ದಿನಗಳ ವರೆಗೂ ನಡೆಯುತ್ತದೆ. ಈ ಖುಷಿಯ ಬೆನ್ನಲ್ಲೇ ಹೊಸ ವರ್ಷದ ಸಂತಸವೂ ಆಗಮಿಸುತ್ತದೆ. ಈ ಎರಡೂ ಸಂಭ್ರಮಗಳ ಸಂಕೇತವಾಗಿ ವಿಶ್ವಾದ್ಯಂತ ಕೇಕ್ ಪ್ರದರ್ಶನಗಳೂ ನಡೆಯುತ್ತವೆ.
ಭಾರತದ ಅನೇಕ ನಗರ - ಪಟ್ಟಣಗಳಲ್ಲೂ ಕೇಕ್ ಪ್ರದರ್ಶನ ನಡೆಯುತ್ತದೆ. ಬೆಂಗಳೂರಿನಲ್ಲೂ ಅನೇಕ ವರ್ಷಗಳಿಂದ ಕೇಕ್ ಪ್ರದರ್ಶನ ನಡೆಯುತ್ತಾ ಬಂದಿದೆ. ಆಯೋಧ್ಯೆಯ ಶ್ರೀರಾಮ ಮಂದಿರ, ಇಂದಿರಾಗಾಂಧಿ, ಮಹಾತ್ಮಾ ಗಾಂಧೀ, ತಾಜ್ಮಹಲ್, ಮದರ್ ಥೇರೇಸಾ, ಕೆಂಪುಕೋಟೆಯೇ ಮೊದಲಾದ ಆಕೃತಿಗಳ ಚಿಕ್ಕ ಹಾಗೂ ಬೃಹತ್ ಗಾತ್ರದ ಕೇಕ್ಗಳ ಪ್ರದರ್ಶನವೂ ನಡೆಯುತ್ತದೆ. ಬೆಂಗಳೂರಿನ ಎಂಜಿ ರಸ್ತೆ, ಗಾಂಧೀ ಬಜಾರ್, ಮೇಖ್ರಿ ವೃತ್ತ, ಜಯನಗರ ಮೊದಲಾದ ಕಡೆಗಳಲ್ಲೂ ಪ್ರದರ್ಶನಗಳು ನಡೆಯುತ್ತವೆ.
ಕೊಟ್ಟಿಗೆ ಮನೆ : ಕನ್ನಡಿಗರು ನವರಾತ್ರಿಯ ಸಂದರ್ಭದಲ್ಲಿ ಮನೆಗಳಲ್ಲಿ ಪಟ್ಟದ ಬೊಂಬೆಗಳಾದಿಯಾಗಿ ನಾನಾ ಬಗೆಯ ಬೊಂಬೆಗಳ ಪ್ರದರ್ಶನವನ್ನು ಮಾಡುವಂತೆಯೇ, ಏಸು ಕ್ರಿಸ್ತನ ಜನನ, ಬಾಲ್ಯ, ಶಿಲುಬೆಗೇರಿಸಿದ ಪರಿಯೇ ಮೊದಲಾದ ಬೊಂಬೆಗಳ ಪ್ರದರ್ಶನವನ್ನೂ ಕೆಲವು ಸಂಪ್ರದಾಯವಾದಿ ಕ್ರೆೃಸ್ತರ ಮನೆಗಳಲ್ಲಿ ನಡೆಸುತ್ತಾರೆ.
ಹಬ್ಬದ ದಿನ ಆಬಾಲವೃದ್ಧರಾದಿಯಾಗಿ ಎಲ್ಲರೂ ಪರಸ್ಪರ ಅಭಿನಂದಿಸುತ್ತಾರೆ. ಚರ್ಚ್ಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯುತ್ತದೆ. ಔತಣ ಕೂಟಗಳೂ ಜರುಗುತ್ತವೆ. ಕ್ರಿಸ್ಮಸ್ ಪಾರ್ಟಿಗಳೂ ನಡೆಯುತ್ತವೆ. ಈ ಎಲ್ಲ ಸಂತೋಷ, ಸಂಭ್ಮಗಳ ನಡುವೆಯೇ ಸಂತಾಕ್ಲಾಸ್ ಉಡುಗೊರೆಗಳನ್ನು ತರುತ್ತಾನೆ ಅಂತ ಮಕ್ಕಳು ಕಾಯುಯ ಹಾಗೆ ಉಳ್ಳವರು ತನಗೇನನ್ನಾದರೂ ನೀಡಿಯಾರೆ ? ಎಂದು ಎದುರು ನೋಡುತ್ತಿರುವ ನಿರ್ಭಾಗ್ಯ ಸೋದರ ಅಥವಾ ಸೋದರಿ ಇಲ್ಲೇ ಎಲ್ಲೋ ನಿಮ್ಮನ್ನೇ ಎದುರು ನೋಡುತ್ತಿದ್ದಾರೆ. ಗಢಗಢ ಚಳಿಯಲಿ ನಡುಗುವ ಆ ದೀನರಿಗೆ ಕಂಬಳಿಯನ್ನೋ, ಸ್ವೆಟರ್ಅನ್ನೋ, ಸಾಕ್ಸ್ಅನ್ನೋ ಸ್ವಪ್ರೇರಣೆಯಿಂದ ಕೊಟ್ಟರೆ ಕ್ರಿಸ್ಮಸ್ ಹಬ್ಬವನ್ನು ನೀವು ಅರ್ಥಪೂರ್ಣವಾಗಿ ಆಚರಿಸಿದಂತೆ.
ಮುಖಪುಟ / ಇವತ್ತು... ಈ ಹೊತ್ತು... |