ಯಲಹಂಕ ಬಳಿ ಜೈವಿಕ ತಂತ್ರಜ್ಞಾನ ಕೇಂದ್ರ ಸ್ಥಾಪನೆ: ಪರಮೇಶ್ವರ್
ಶಿವಮೊಗ್ಗ : ಬೆಂಗಳೂರಿನ ಮೇಖ್ರಿ ವೃತ್ತದಿಂದ ಯಲಹಂಕದವರೆಗಿನ ಪ್ರದೇಶವನ್ನು ರಾಜ್ಯ ಸರಕಾರವು ಜೈವಿಕ ತಂತ್ರಜ್ಞಾನ ವಲಯ ಎಂದು ಗುರುತಿಸಿದ್ದು, ಯಲಹಂಕ ಬಳಿ 50 ಎಕರೆ ಪ್ರದೇಶದಲ್ಲಿ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಗುರುವಾರ ಜವಾಹರಲಾಲ್ ಎಂಜಿನಿಯರಿಂಗ್ ಕಾಲೇಜಿನ ಸಿಂಗಲ್ ರೂಂ ಹಾಸ್ಟೆಲ್ ಕಟ್ಟಡ ಉದ್ಘಾಟಿಸಿದ ತರುವಾಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಸಚಿವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬಳಿಕ ಮಹತ್ವ ಪಡೆದಿರುವ ಹಾಗೂ ತ್ವರಿತ ಗತಿಯಲ್ಲಿ ಬೆಳೆಯುತ್ತಿರುವ ಕ್ಷೇತ್ರ ಜೈವಿಕ ತಂತ್ರಜ್ಞಾನ ಎಂದು ಹೇಳಿದರು.
ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯ ಅಗ್ರಸ್ಥಾನದಲ್ಲಿರುವಂತೆ ನೋಡಿಕೊಳ್ಳಲು ಸರಕಾರ ಪ್ರಯತ್ನಿಸುವುದು ಎಂದ ಅವರು, ರಾಜ್ಯದ 50 ಪದವಿ ಕಾಲೇಜುಗಳಲ್ಲಿ ಜೈವಿಕ ತಂತ್ರಜ್ಞಾನ ಅಧ್ಯಯನಕ್ಕೆ ಅವಕಾಶ ನೀಡಲಾಗಿದೆ, ಪದವಿ ಹಂತದಲ್ಲಿ ಜೈವಿಕ ತಂತ್ರಜ್ಞಾನವನ್ನು ರಸಾಯನ ಹಾಗೂ ಸಸ್ಯಶಾಸ್ತ್ರ ಪ್ರಾಧ್ಯಾಪಕರೇ ಭೋದಿಸಬಹುದಾಗಿದೆ ಎಂದರು.
ಕೇಂದ್ರ ಸರಕಾರವು ಈಗಾಗಲೇ ಜೈವಿಕ ತಂತ್ರಜ್ಞಾನ ಅಧ್ಯಯನಕ್ಕಾಗಿ ಕುವೆಂಪು ವಿಶ್ವವಿದ್ಯಾಲಯಕ್ಕೆ 20 ಲಕ್ಷ ರೂಗಳನ್ನು ನೀಡಿದೆ. ಕಂಪ್ಯೂಟರ್ ಎಂಜಿನಿಯರಿಂಗ್ ಹೊರತಾದ ಎಂಜಿನಿಯರಿಂಗ್ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳೂ ಕಂಪ್ಯೂಟರ್ ಕಲಿಯಲಿ ಎಂಬ ಉದ್ದೇಶದಿಂದ 40 ಲಕ್ಷ ರುಪಾಯಿ ವೆಚ್ಚದಲ್ಲಿ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದ ಅವರು, ನೆಟ್ ಸೌಲಭ್ಯ ಒದಗಿಸುವ ಮೂಲಕ ಡಿಜಿಟಲ್ ಗ್ರಂಥಾಲಯ ಸೌಲಭ್ಯವನ್ನೂ ಒದಗಿಸಲಾಗುವುದು ಎಂದರು.