ಅಜರ್, ಜಡೇಜಾ, ಮನೋಜ್ರಿಂದ ಅರ್ಜುನ ಪ್ರಶಸ್ತಿ ಕಸಿಯಲು ಕೇಂದ್ರ ನಿರ್ಧಾರ
ನವದೆಹಲಿ : ಮ್ಯಾಚ್ಫಿಕ್ಸಿಂಗ್ನಲ್ಲಿ ಕಳಂಕಿತರಾಗಿರುವ ಮಾಜಿ ಕ್ರಿಕೆಟ್ ತಾರೆಗಳಾದ ಮೊಹಮದ್ ಅಜರುದ್ದೀನ್, ಅಜಯ್ ಜಡೇಜಾ ಹಾಗೂ ಮನೋಜ್ ಪ್ರಭಾಕರ್ ಅವರಿಂದ ಅರ್ಜುನ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ವಾಪಸ್ಸು ಪಡೆಯುವುದೆಂದು ಕೇಂದ್ರ ಕ್ರೀಡಾ ಸಚಿವೆ ಉಮಾಭಾರತಿ ತಿಳಿಸಿದ್ದಾರೆ.
ಮೋಸದಾಟದಲ್ಲಿ ಪಾಲ್ಗೊಂಡ ಆಟಗಾರರಿಗೆ ಬಿಸಿಸಿಐ ಹೇರಿರುವ ನಿಷೇಧದ ಕುರಿತ ಪ್ರಶ್ನೆಯಾಂದಕ್ಕೆ ಉಮಾಭಾರತಿ ಸಂಸತ್ತಿನಲ್ಲಿ ಶುಕ್ರವಾರ ಉತ್ತರಿಸುತ್ತಿದ್ದರು. ನಾವು ಕಳಂಕಿತ ಆಟಗಾರರಿಗೆ ಸರ್ಕಾರ ನೀಡಿರುವ ಅತ್ಯುಚ್ಛ ಕ್ರೀಡಾ ಪ್ರಶಸ್ತಿಗಳನ್ನು ವಾಪಸ್ಸು ಪಡೆಯಲು ನಿಶ್ಚಯಿಸಿದ್ದೇವೆ ಎಂದರು.
ಕ್ರೀಡಾ ಸಚಿವಾಲಯದ ಅನುಮೋದನೆಯಂತೆ ಪ್ರಶಸ್ತಿ ವಾಪಸ್ಸು ಪಡೆಯುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಆದರೆ, ಪ್ರಶಸ್ತಿಗಳನ್ನು ವಾಪಸ್ಸು ಪಡೆಯುವ ಮುನ್ನ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಲು ಕಳಂಕಿತ ಆಟಗಾರರಿಗೆ 15 ದಿನ ಕಾಲಾವಕಾಶ ನೀಡುತ್ತೇವೆ ಎಂದು ಉಮಾಭಾರತಿ ಹೇಳಿದರು. ಅಜರುದ್ದೀನ್ 1986 ರಲ್ಲಿ , ಪ್ರಭಾಕರ್ 1993 ರಲ್ಲಿ ಹಾಗೂ ಜಡೇಜಾ 1997 ರಲ್ಲಿ ಅರ್ಜುನ ಪ್ರಶಸ್ತಿ ಪಡೆದಿದ್ದರು.
(ಇನ್ಫೊ ವಾರ್ತೆ)