ಸಂಪಿಗೆ ಫುಲ್ಸ್ಟಾಪ್, ಮಂಗಳವಾರದಿಂದ ಅಂಚೆ ಸೇವೆ ಮಾಮೂಲು
ನವದೆಹಲಿ : ಸುಮಾರು ಪ್ರತಿಶತ 70ರಷ್ಟು ಅಂಚೆ ನೌಕರರ ಬೆಂಬಲವಿರುವ ಅಂಚೆ ನೌಕರರ ರಾಷ್ಟ್ರೀಯ ಒಕ್ಕೂಟ (ಎನ್ಎಫ್ಪಿಇ) ಸಂಪಿನ ಪಟ್ಟು ಬಿಟ್ಟುಕೊಟ್ಟಿದ್ದು, ಮಂಗಳವಾರದಿಂದ ಅಂಚೆ ಸೇವೆ ಮಾಮೂಲಿನಂತಿರುತ್ತದೆ.
ಭಾನುವಾರ ರಾತ್ರಿ ಕೇಂದ್ರ ಸಂಪರ್ಕ ಖಾತೆ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರ ಜೊತೆ ಚರ್ಚೆ ನಡೆಸಿದ ನಂತರ, ಭಾರತೀಯ ಅಂಚೆ ನೌಕರರ ಒಕ್ಕೂಟ ಮತ್ತು ಫೆಡರೇಷನ್ ಆಫ್ ನ್ಯಾಷನಲ್ ಪೋಸ್ಟಲ್ ಆರ್ಗನೈಜೇಷನ್ಗಳು ಮುಷ್ಕರ ಕೈಬಿಟ್ಟು, ಸೋಮವಾರದಿಂದಲೇ ಕೆಲಸಕ್ಕೆ ಹಾಜರಾಗಲು ನಿರ್ಧರಿಸಿದವು. ಮುಷ್ಕರ ಕೈಬಿಟ್ಟ ಎರಡು ಅಂಚೆ ಒಕ್ಕೂಟಗಳ ನಿರ್ಧಾರವನ್ನು ಖಂಡಿಸಿದ್ದ ಅಂಚೆ ನೌಕರರ ರಾಷ್ಟ್ರೀಯ ಒಕ್ಕೂಟವೂ ಮಂಗಳವಾರದಿಂದ ಕೆಲಸಕ್ಕೆ ಹಾಜರಾಗಲು ಸೋಮವಾರ ಸಂಜೆ ನಿರ್ಧರಿಸಿತು.
ಸಂಪಿನಿಂದ ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇವೆ. ಸಚಿವರ ತಂಡದ ಮುಂದೆ ನಮ್ಮ ಬೇಡಿಕೆಗಳನ್ನು ಮಂಡಿಸಲು ನಿರ್ಧರಿಸಿದ್ದೇವೆ ಎಂದು ಒಕ್ಕೂಟದ ಮಹಾ ಕಾರ್ಯದರ್ಶಿ ಆರ್.ಎಲ್.ಭಟ್ಟಾಚಾರ್ಯ ತಿಳಿಸಿದ್ದಾರೆ. ಇನ್ನು ಮುಂದೆ ಮುಷ್ಕರವನ್ನು ಮೊದಲೇ ಕೈಬಿಟ್ಟ ಎರಡು ಸಂಘಟನೆಗಳೊಂದಿಗೆ ಎನ್ಎಫ್ಪಿಇ ಯಾವುದೇ ಚಳವಳಿಯಲ್ಲಿ ಭಾಗ-ವ-ಹಿಸುವುದಿಲ್ಲ ಎಂದೂ ಹೇಳಿದ್ದಾರೆ.
(ಇನ್ಫೋ ವಾರ್ತೆ)