ಪರಶುರಾಮ್ ಎಕ್ಸ್ಪ್ರೆಸ್ ರೈಲು ದರೋಡೆ : ಮೂವರ ಬಂಧನ
ಮಂಗಳೂರು : ತಿರುವನಂತಪುರದಿಂದ ಮಂಗಳೂರಿಗೆ ಬರುತ್ತಿದ್ದ ಪರಶುರಾಮ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮೀನು ವ್ಯಾಪಾರಿಗಳಿಂದ ಸುಮಾರು 14.3 ಲಕ್ಷ ರುಪಾಯಿ ದೋಚಿ ಪರಾರಿಯಾಗಿದ್ದ ದರೋಡೆಕೋರರ ಪೈಕಿ ಮೂವರನ್ನು ಬಂಧಿಸಲಾಗಿದೆ.
ಶನಿವಾರ ರಾತ್ರಿ ಸುಮಾರು 9.30. ಹಸನ್, ಶಬೀರ್, ಫಾಸನ್, ಯಾನಸ್, ಯೋಗೀಶ್ ಮತ್ತು ಹನೀಫ್ ಕಲ್ಲಿಕೋಟೆಯಿಂದ ಮಂಗಳೂರಿಗೆ ಮೀನು ವ್ಯಾಪಾರಿಗಳ ಹಣ ತರುತ್ತಿದ್ದರು. ಸಹಪ್ರಯಾಣಿಕರಂತೆ ಕುಳಿತಿದ್ದ ಆರೋಪಿಗಳು ಕುಂಬ್ಳೆ ಸಮೀಪ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ದುಡ್ಡು ದೋಚಿಕೊಂಡು ರೈಲಿನ ಚೈನ್ ಎಳೆದು ಪರಾರಿಯಾಗಿದ್ದಾರೆ. ದರೋಡೆ ಸುದ್ದಿಯನ್ನು ಕಾಸರಗೋಡು ಸೇರಿದಂತೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಪ್ರಸಾರ ಮಾಡಲಾಯಿತು. ಗಸ್ತಿನಲ್ಲಿದ್ದ ಬಂದ್ಯೋಡು ಪೊಲೀಸರು ದರೋಡೆಕೋರರ ಪೈಕಿ ಮೂವರನ್ನು ್ನ ಬಂಧಿಸಿದರು.
ಸೂರಂಬೈಲಿನ ಪ್ರವೀಣ್ ಕುಮಾರ್ (22), ತಲಪಾಡಿಯ ಕೆ. ಸಿ.ರೋಡ್ ನಿವಾಸಿ ಲತೀಫ್ (32) ಹಾಗೂ ಮುಳಿಗುಡ್ಡಿ ನಿವಾಸಿ ಅಬ್ದುಲ್ ಖಾದರ್ (25) ಇವರೇ ಬಂಧಿತ ಆರೋಪಿಗಳು. ಇವರಿಂದ ಪೊಲೀಸರು ಒಟ್ಟು 5 ಲಕ್ಷ 39 ಸಾವಿರದ 700 ರುಪಾಯಿ ವಶ ಪಡಿಸಿಕೊಂಡಿದ್ದಾರೆ.
(ಇನ್ಫೋ ವಾರ್ತೆ)