ತನ್ನಂತೆ ಇತರರ ಬಗೆವ ಬದುಕು ಎಲ್ಲರದಾಗಲಿ - ಡಾ.ರಾಜ್ಕುಮಾರ್
ಬೆಂಗಳೂರು : ಜೀವನದಲ್ಲಿ ಸಾಕಷ್ಟು ಹಣ ಗಳಿಸುವ ಸ್ವಾರ್ಥವಷ್ಟೇ ಮುಖ್ಯವಾಗಬಾರದು. ನಮ್ಮ ಜೊತೆಗೆ ಇತರರನ್ನೂ ಬೆಳಿಸುವ ಉದಾರ ಗುಣವನ್ನು ಮನುಷ್ಯ ಬೆಳೆಸಿಕೊಳ್ಳಬೇಕು ಎಂದು ವರನಟ ಡಾ. ರಾಜ್ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಏರ್ಪಡಿಸಿದ್ದ ಧನ್ಯಮಿಲನ ಕಾರ್ಯಕ್ರಮದ ನಂತರ ಭಾನುವಾರ ಬಹಿರಂಗ ಸಮಾರಂಭವೊಂದರಲ್ಲಿ ರಾಜ್ ಕಾಣಿಸಿಕೊಂಡರು. ಜಯನಗರ ಬಡಾವಣೆಯಲ್ಲಿ ಬೆಲ್ಲಿನಿ ಸಂಸ್ಥೆಯ ವ್ಯಾಪಾರಿ ಮಳಿಗೆಯಾಂದನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮನುಷ್ಯ ತನ್ನಂತೆ ಇತರರನ್ನು ಬಗೆಯಬೇಕು. ಉಳ್ಳವರು ಇಲ್ಲದವರಿಗೆ ಸಹಾಯ ನೀಡಬೇಕು ಎಂದು ಹೇಳಿದ ರಾಜ್, ಬೆಲ್ಲಿನಿ ಸಂಸ್ಥೆಯು ಪಾರ್ವತಮ್ಮ ರಾಜ್ಕುಮಾರ್ ಅವರು ಅನಾಥರಿಗಾಗಿ ನಡೆಸುತ್ತಿರುವ ಶಕ್ತಿಧಾಮಕ್ಕೆ ನೀಡಿರುವ ಆರ್ಥಿಕ ಸಹಾಯವನ್ನು ಶ್ಲಾಘಿಸಿದರು. ಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಭಾನುವಾರದಂದೇ ರಾಜ್ ಅವರು ಮಲ್ಲೇಶ್ವರಂ ಬಡಾವಣೆಯಲ್ಲೂ ಬೆಲ್ಲಿನಿ ಸಂಸ್ಥೆಯ ಮತ್ತೊಂದು ಶಾಖೆಯ ಕಾರ್ಯಾರಂಭಕ್ಕೆ ಚಾಲನೆ ನೀಡಿದರು. ರಾಜ್ ಅವರನ್ನು ನೋಡಲು ಅಂಗಡಿಯ ಮುಂದೆ ನೆರೆದಿದ್ದ ಸಾವಿರಾರು ಅಭಿಮಾನಿಗಳು ಜಯಕಾರದ ಘೋಷಣೆ ಕೂಗಿದರು.
(ಇನ್ಫೋ ವಾರ್ತೆ)