ಸಂಘಟನೆಗಳಲ್ಲಿ ಒಡಕು : ಮುಷ್ಕರ ಕೈಬಿಡಲು ಎರಡು ಒಕ್ಕೂಟಗಳ ನಿರ್ಧಾರ
ನವದೆಹಲಿ : ವೇತನ ಪರಿಷ್ಕರಣೆಗೆ ಸಂಬಂಧಿಸಿ ಮುಷ್ಕರ ಹೂಡಿರುವ ಅಂಚೆ ನೌಕರರ ಸಂಘಟನೆಗಳಲ್ಲಿ ನ ಒಡಕು ಬಹಿರಂಗವಾಗಿದ್ದು, ಎರಡು ಸಂಘಟನೆಗಳು ಮುಷ್ಕರ ನಿಲ್ಲಿಸಲು ಭಾನುವಾರ ರಾತ್ರಿ ನಿರ್ಧರಿಸಿವೆ. ಇದರಿಂದಾಗಿ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದ ಅಂಚೆ ಸೇವೆ ಸೋಮವಾರದಿಂದ ಸ್ವಲ್ಪ ಮಟ್ಟಿಗೆ ಶುರುವಾಗುವ ನಿರೀಕ್ಷೆಯಿದೆ.
ಕೇಂದ್ರ ಸಂಪರ್ಕ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹಾಗೂ ಅಂಚೆ ನೌಕರರ ಸಂಘಟನೆಗಳ ನಡುವೆ ಭಾನುವಾರ ನಡೆದ ಮಾತುಕತೆಯ ಸಂದರ್ಭದಲ್ಲಿ ಏರ್ಪಟ್ಟಿರುವ ಒಪ್ಪಂದದ ಹಿನ್ನೆಲೆಯಲ್ಲಿ ನ್ಯಾಷನಲ್ ಪೋಸ್ಟಲ್ ಆರ್ಗನೈಸೇಷನ್ ಮತ್ತು ಭಾರತೀಯ ಪೋಸ್ಟಲ್ ಯೂನಿಯನ್ಗಳು ಮುಷ್ಕರವನ್ನು ಅಂತ್ಯಗೊಳಿಸಲು ನಿರ್ಧರಿಸಿವೆ ಎಂದು ಎರಡೂ ಸಂಘಟನೆಗಳ ಕಾರ್ಯದರ್ಶಿಗಳು ಭಾನುವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೌಕರರ ಬೇಡಿಕೆಗಳಲ್ಲಿ , ಪಿಂಚಣಿ ಬದಲು ಸಾಮಾಜಿಕ ಭದ್ರತಾ ಉಪಯೋಗಿ ಯೋಜನೆಯನ್ನು ಕಾರ್ಯಗತ ಗೊಳಿಸಲು ಮತ್ತು ಅಂಚೆ ಲೆಕ್ಕ ಪತ್ರ ಮತ್ತು ಮೇಲ್ ಮೋಟಾರು ಸೇವಾ ಇಲಾಖೆಗಳಿಗೆ ಸಂಬಂಧಿಸಿದಂತೆ ಕೇಡರ್ ಪರಿಷ್ಕರಣೆಗೆ ಸರಕಾರ ಒಪ್ಪಿಕೊಂಡಿದ್ದು, ಬೋನಸ್ ಮತ್ತು ವೇತನ ಪರಿಷ್ಕರಣೆ ಕುರಿತು ಪರಿಶೀಲಿಸುವುದಾಗಿ ಸಂಪರ್ಕ ಸಚಿವರು ಹೇಳಿದ್ದಾರೆ.
ಈ ನಡುವೆ ಸಿಪಿಎಂಗೆ ಸೇರಿದೆ ಎನ್ಎಫ್ಪಿಇ ಮುಷ್ಕರವನ್ನು ಮುಂದುವರಿಸಲು ನಿರ್ಧರಿಸಿದೆ ಎನ್ಎಫ್ಪಿಇಯ ಕಾರ್ಯದರ್ಶಿ ಆರ್. ಎಲ್. ಭಟ್ಟಾಚಾರ್ಯ ಹೇಳಿದ್ದಾರೆ. ಕಾರ್ಮಿಕ ಚಳುವಳಿಯಲ್ಲಿ ರಾಜಕೀಯ ಬೇರೆಸುವ ಮೂಲಕ ದ್ರೋಹ ಬಗೆಯಲಾಗಿದೆ ಎಂದು ಅವರು ದೂರಿದರು. ಎನ್ಎಫ್ಪಿಇ ಸೋಮವಾರದಂದು ಸಭೆ ಸೇರಲಿದ್ದು ತನ್ನ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಎರಡು ಸಂಘಟನೆಗಳು ಮುಷ್ಕರ ಕೈ ಬಿಟ್ಟಿದ್ದರೂ ಸುಮಾರು 70 ಶೇಕಡಾ ಮಂದಿ ಎನ್ಎಫ್ಪಿಇ ಸಂಘಟನೆಗೆ ಸೇರಿರುವುದರಿಂದ ಸದ್ಯದಲ್ಲಿಯೇ ಅಂಚೆ ಸೇವೆ ಮಾಮೂಲು ಸ್ಥಿತಿಗೆ ಬರಬಹುದು ಎಂದು ನಿರೀಕ್ಷಿಸುವುದು ಸಾಧ್ಯವಿಲ್ಲ.
(ಇನ್ಫೋ ವಾರ್ತೆ)