ಕಂಪ್ಯೂಟರ್ ಜಾಲಕ್ಕೆ ಸದ್ಯದಲ್ಲಿಯೇ ಬೆಂಗಳೂರುಮೈಸೂರು ಸಾರಿಗೆ ವ್ಯವಸ್ಥೆ
ಮೈಸೂರು : ಮೈಸೂರು ಮತ್ತು ಬೆಂಗಳೂರು ನಡುವೆ ಸಂಚರಿಸುವ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆಯನ್ನು ಸದ್ಯದಲ್ಲಿಯೇ ಕಂಪ್ಯೂಟರ್ಗೆ ಅಳವಡಿಸಲಾಗುವುದು ಎಂದು ಸಾರಿಗೆ ಸಚಿವ ಸಗೀರ್ ಅಹ್ಮದ್ ಭಾನುವಾರ ಮೈಸೂರಿನಲ್ಲಿ ಹೇಳಿದ್ದಾರೆ.
ಆರ್. ಎಸ್. ನಾಯ್ಡು ನಗರದಲ್ಲಿ ಹೊಸ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಈ ವ್ಯವಸ್ಥೆಯು ಮೈಸೂರು ಮತ್ತು ಬೆಂಗಳೂರು ನಡುವೆ ಓಡಾಡುವ ಪ್ರತಿ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ, ಬಸ್ ಹೊರಡುವ ಮತ್ತು ತಲುಪುವ ವೇಳೆ, ಮಾರ್ಗ ಮಧ್ಯದಲ್ಲಿನ ನಿಲುಗಡೆಗಳ ಕುರಿತು ಎಲ್ಲ ಮಾಹಿತಿಯನ್ನು ಒಳಗೊಂಡಿರುತ್ತದೆ ಎಂದರು.
ಕಂಪ್ಯೂಟರೀಕೃತ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ , ಬೆಂಗಳೂರು - ಮೈಸೂರು ನಡುವಿನ ರಾಜ್ಯ ರಸ್ತೆಯಲ್ಲಿರುವ ಹೋಟಲ್ ಮತ್ತು ರೆಸ್ಟೋರೆಂಟ್ಗಳ ಬಗ್ಗೆ ಅಧ್ಯಯನ ನಡೆಸಲು ಪುಣೆಯ ಕೇಂದ್ರೀಯ ಸಾರಿಗೆ ಸಂಸ್ಥೆಯ ತಜ್ಞರ ಗುಂಪು ಸದ್ಯದಲ್ಲಿಯೇ ಬೆಂಗಳೂರಿಗೆ ಭೇಟಿ ನೀಡಲಿದೆ. ಹೈವೇಯಲ್ಲಿರುವ ಹೋಟೆಲ್ಗಳಲ್ಲಿ ಸಿಗುವ ಆಹಾರ ಪದಾರ್ಥಗಳು, ಹೋಟೆಲ್ ಮತ್ತು ವಸತಿಗೃಹಗಳಲ್ಲಿನ ಶುಚಿತ್ವ , ಶೌಚಾಲಯ ವ್ಯವಸ್ಥೆಗಳ ಬಗ್ಗೆ ಈ ಗುಂಪು ವಿವರವಾದ ಮಾಹಿತಿ ಸಂಗ್ರಹಿಸಲಿದೆ ಎಂದರು.
ಈ ಗುಂಪು ಸಲ್ಲಿಸುವ ವರದಿಯ ಆಧಾರದ ಮೇಲೆ ರಾಜ್ಯ ಸರಕಾರವು ಕೆಎಸ್ಆರ್ಟಿಸಿ ಬಸ್ಸುಗಳು ಯಾವ ಯಾವ ಹೋಟೆಲ್ಗಳ ಮುಂದೆ ಊಟ ಉಪಹಾರಗಳಿಗೆ ನಿಲ್ಲಬಹುದು ಮತ್ತು ಎಷ್ಟು ಹೊತ್ತು ನಿಲ್ಲಬಹುದು ಎನ್ನುವ ಬಗ್ಗೆ ಅನುಮತಿ ಪತ್ರ ನೀಡುತ್ತದೆ ಎಂದು ಸಚಿವರು ಹೇಳಿದರು. ತಮ್ಮ ಮೈಸೂರು ಭೇಟಿಯ ಸಂದರ್ಭದಲ್ಲಿ ಸಚಿವರು ಹುಣಸೂರು, ಜೈಪುರ, ಇಳ್ವಲಗಳಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣಗಳನ್ನು ಉದ್ಘಾಟಿಸಿದರು.
(ಇನ್ಫೋ ವಾರ್ತೆ)