ಜಾತಿ ವೈಷಮ್ಯದ ಗಲಭೆ , ಚನ್ನಪಟ್ಟಣದಲ್ಲಿ ಲಾಠಿ ಚಾರ್ಜ್, ಅಶ್ರುವಾಯು
ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನಪಟ್ಟಣದಲ್ಲಿ ಕಲ್ಲು ತೂರಾಟದಲ್ಲಿ ತೊಡಗಿದ್ದ ಸುಮಾರು 15 ಸಾವಿರದಷ್ಟಿದ್ದ ಗುಂಪೊಂದನ್ನು ನಿಯಂತ್ರಿಸಲು ಸೋಮವಾರ ಪೊಲೀಸರು ಅಶ್ರುವಾಯು ಶೆಲ್ಗಳನ್ನು ಸಿಡಿಸಿ, ಲಾಠಿ ಪ್ರಹಾರ ಮಾಡಿದಾಗ ನಗರದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.
ಮತ್ತೊಂದು ಜಾತಿಗೆ ಸೇರಿದ ವ್ಯಕ್ತಿಗಳು ಬಳಸಿದ್ದ ಅವಾಚ್ಯ ಶಬ್ದಗಳನ್ನು ಖಂಡಿಸಿ, ಒಕ್ಕಲಿಗರ ಹಿತರಕ್ಷಣಾ ವೇದಿಕೆ ಏರ್ಪಡಿಸಿದ್ದ ಪ್ರತಿಭಟನೆ ಪ್ರದರ್ಶನ ಹಿಂಸಾರೂಪ ತಳೆದಾಗ ಪೊಲೀಸರು ಲಾಠಿ ಪ್ರಹಾರ ಮಾಡಿದರು. ಪ್ರತಿಭಟನಾಕಾರರು ಸಹಾಯಕ ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಮನವಿ ಪತ್ರ ಸಲ್ಲಿಸಿ ಹಿಂತಿರುಗುತ್ತಿದ್ದಾಗ ಪ್ರತಿಭಟನೆ ಹಿಂಸಾರೂಪ ತಳೆಯಿತು.
ಭಾರಿ ಸಂಖ್ಯೆಯಲ್ಲಿದ್ದ ಪೊಲೀಸರು ಹಿಂಸೆಯನ್ನು ಹತ್ತಿಕ್ಕಲು ಲಾಠಿ ಪ್ರಹಾರ ನಡೆಸಿದರು. ಲಾಠಿ ಪ್ರಹಾರಕ್ಕೂ ಗುಂಪು ಜಗ್ಗದಿದ್ದಾಗ ಅಶ್ರುವಾಯು ಶೆಲ್ಗಳನ್ನು ಸಿಡಿಸುವುದು ಅನಿವಾರ್ಯವಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರಾಮಕೃಷ್ಣ, ಚೆನ್ನಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದು, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ. ಈ ಘಟನೆಯ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ ಎಂದೂ ಅವರು ಹೇಳಿದ್ದಾರೆ.
ಘಟನೆಯ ಹಿನ್ನೆಲೆ : ಹುಡುಗನೊಬ್ಬ ಚುಡಾಯಿಸಿದನೆಂದು ಬೇಸತ್ತು ಕಳೆದ ತಿಂಗಳು ಮಂಡ್ಯದಲ್ಲಿ ಹುಡುಗಿಯಾಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪತ್ರಿಕೆಯಾಂದರಲ್ಲಿ ಪ್ರಕಟವಾಗಿದ್ದ ವರದಿಯನ್ನು ಖಂಡಿಸಿ ಡಿಸೆಂಬರ್ 11ರಂದು ಕೆಲವು ದಲಿತ ಮುಖಂಡರು ನಡೆಸಿದ ಪ್ರದರ್ಶನದ ಸಂದರ್ಭದಲ್ಲಿ ಅವಾಚ್ಯ ಪದಗಳನ್ನು ಬಳಸಿದರು ಎಂದು ಆರೋಪಿಸಲಾಗಿದ್ದು, ಕೆಲವು ಅಶ್ಲೀಲ ಹೇಳಿಕೆಗಳು ಪಟ್ಟಣದ ಗೋಡೆಗಳ ಮೇಲೂ ರಾರಾಜಿಸಿದ್ದವು. ಇದನ್ನು ಖಂಡಿಸಿ, ಸೋಮವಾರ ಹಿತರಕ್ಷಣಾ ವೇದಿಕೆ ಪ್ರತಿಭಟನೆ ಹಮ್ಮಿಕೊಂಡಿತ್ತು. (ಯು.ಎನ್.ಐ)
ಮುಖಪುಟ / ಇವತ್ತು... ಈ ಹೊತ್ತು...