ವೀರಪ್ಪನ್ನ್ನು ಖಂಡಿತಾ ಹಿಡಿಯುತ್ತೇವೆ-ಮುಖ್ಯಮಂತ್ರಿ ಎಸ್.ಎಂ. ಕೃಷ್ಣ
ಚೆನ್ನೈ : ಯಶಸ್ವಿ ವೀರಪ್ಪನ್ ಶಿಕಾರಿಯ ಬಗ್ಗೆ ಉಭಯ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರ ಆಶಾಭಾವನೆ ಹೊಂದಿದ್ದು, ಕಾರ್ಯಾಚರಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿವೆ ಎಂದು ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರೊಂದಿಗೆ ಸೋಮವಾರ ಬೆಳಿಗ್ಗೆ ಮಾತುಕತೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ವೀರಪ್ಪನ್ ಶಿಕಾರಿಗೆ ಕೇಂದ್ರ ಸರ್ಕಾರ ನೀಡಿರುವ ನೆರವಿನ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ವೀರಪ್ಪನ್ ಕಾರ್ಯಾಚರಣೆ ಉಭಯ ರಾಜ್ಯಗಳ ಪೊಲೀಸ್ ಪಡೆಗಳ ಕೆಲಸ ಎನ್ನುವ ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ರ ಪುನರುಚ್ಚಾರದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ರಾಜ್ ಬಿಡುಗಡೆ ಸಂಬಂಧದಲ್ಲಿ ಎಲ್ಲಾ ರೀತಿಯ ಸಹಕಾರ ನೀಡಿದ ಕರುಣಾನಿಧಿ ಹಾಗೂ ತಮಿಳುನಾಡು ಸರ್ಕಾರಕ್ಕೆ ಧನ್ಯವಾದ ಹೇಳಲು ತಾವು ಚೆನ್ನೈಗೆ ಆಗಮಿಸಿರುವುದಾಗಿ ಹೇಳಿದ ಅವರು, ಟಾಡಾ ಬಂಧಿಗಳ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ವಿಶೇಷ ನ್ಯಾಯಾಧೀಶರನ್ನು ನೇಮಿಸಿದೆ. ವಿಚಾರಣೆ ಜನವರಿ 6 ರಿಂದ ಪ್ರಾರಂಭವಾಗುತ್ತದೆ ಎಂದರು.
ವೀರಪ್ಪನ್ ಪತ್ತೆಗೆ ವೈಮಾನಿಕ ಸಮೀಕ್ಷೆ : ದಂತಚೋರ ವೀರಪ್ಪನ್ನ ಚಲನವಲನಗಳನ್ನು ಗುರ್ತಿಸಲು ಕೊಯಮತ್ತೂರು ಹಾಗೂ ನೀಲಗಿರಿ ಅರಣ್ಯ ಪ್ರದೇಶಗಳಲ್ಲಿ ಭಾನುವಾರ ವೈಮಾನಿಕ ಕಾರ್ಯಾಚರಣೆ ನಡೆಸಿರುವುದಾಗಿ ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.
ಹಂದಿಯೂರು, ಸತ್ಯಮಂಗಲ ಹಾಗೂ ಕದಂಬೂರು ಅರಣ್ಯ ಪ್ರದೇಶಗಳಲ್ಲೂ ಇಂಥದ್ದೇ ಕಾರ್ಯಾಚರಣೆ ನಡೆಯಲಿದ್ದು, ಈ ಕಾರ್ಯಾಚರಣೆಯಲ್ಲಿ ಎಸ್ಟಿಎಫ್ಗೆ ಗಡಿ ಭದ್ರತಾ ಪಡೆ ಸಹಕರಿಸುವುದು. ಪ್ರಸ್ತುತ ನೀಲಗಿರಿ ಅರಣ್ಯ ಪ್ರದೇಶದಲ್ಲಿ ವೀರಪ್ಪನ್ ಇರುವುದಾಗಿ ನಂಬಲಾಗಿದ್ದು , ಆತ ಕೇರಳ ಇಲ್ಲವೇ ಕರ್ನಾಟಕದ ಅರಣ್ಯ ಪ್ರದೇಶಗಳಿಗೆ ತನ್ನ ಅಡಗುತಾಣ ಪ್ರವೇಶಿಸದಂತೆ ಎಸ್ಟಿಎಫ್ ಕಟ್ಟೆಚ್ಚರ ವಹಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ಯುಎನ್ಐ/ಇನ್ಫೋ ವಾರ್ತೆ)