ಕನ್ನಡ ಮರೆಯಾಗಲು ಬಿಡಬೇಡಿ : ಸಿ.ಆರ್. ಸಿಂಹ
ಕೋಲಾರ : ಸಂಸ್ಕೃತ ಒಂದು ಶ್ರೀಮಂತ ಭಾಷೆ. ಎಲ್ಲ ಭಾಷೆಗಳಿಗೂ ಸಂಸ್ಕೃತವೇ ಮೂಲ ಎನ್ನುತ್ತಾರೆ ಪಂಡಿತರು. ವ್ಯಾಸ, ವಾಲ್ಮೀಕಿ, ಕಾಳಿದಾಸ, ಭಾಸ, ಬಾಣ, ಭಾರವಿಯೇ ಮೊದಲಾದ ಕವಿರತ್ನರ ಕೃತಿಗಳಿಂದ ಸಂಪದ್ಭರಿತವಾದ ಸಂಸ್ಕೃತ ಇಂದು ಜನಮಾನಸದಿಂದ ಮರೆಯಾಗಿ ಹೋಗಿದೆ. ಮುಂದೊಂದು ದಿನ ಕನ್ನಡಕ್ಕೂ ಇದೇ ಸ್ಥಿತಿ ಬರುತ್ತದೆಯೇ ಎಂಬ ಭಯ ಕಾಡುತ್ತದೆ ಎಂದು ಚಿತ್ರನಟ ಸಿ.ಆರ್. ಸಿಂಹ ಹೇಳಿದ್ದಾರೆ.
ಇಲ್ಲಿನ ದೇವರಾಜ ಅರಸು ವೈದ್ಯಕೀಯ ವಿದ್ಯಾಲಯದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಸ್ಪಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಮಮ್ಮಿ, ಡ್ಯಾಡಿ, ಹಾಯ್, ಹಲೋ, ವಾಟ್ ಯಾ, ನೋ ಯಾ ಎಂದ ಮಾತ್ರಕ್ಕೆ ನಾನು ಅಮೆರಿಕನ್ನರಾಗಲು ಸಾಧ್ಯವಿಲ್ಲ. ನಮ್ಮ ಭಾಷೆಗೂ ಒಂದು ಗತ್ತಿದೆ, ಸೊಗಡಿದೆ, ಪರಂಪರೆ ಇದೆ. ಇತಿಹಾಸ ಇದೆ. ಇದನ್ನು ಅರಿತು ನಾವು ನಮ್ಮ ಭಾಷೆಯನ್ನು ಬೆಳೆಸಬೇಕು ಎಂದರು.
ಕೆ.ವಿ. ಪುಟ್ಟಪ್ಪ, ದ.ರಾ. ಬೇಂದ್ರೇ, ಶಿವರಾಮ ಕಾರಂತ, ಮಾಸ್ತಿ, ಗೋಕಾಕ್, ಕಾರ್ನಾಡ್, ಅನಂತಮೂರ್ತಿ, ಡಿ.ವಿ.ಜಿ, ಪು.ತಿ.ನ ಮುಂತಾದ ದಿಗ್ಗಜರ ಸಾಹಿತ್ಯದಿಂದ ಶ್ರೀಮಂತವಾದ ಕನ್ನಡ ಭಾಷೆ. ಏಳು ಜ್ಞಾನಪೀಠ ಪ್ರಶಸ್ತಿ ಪಡೆದಿದೆ. ನಮ್ಮ ನಾಡು, ನುಡಿ, ಪರಂಪರೆಗೆ 1500 ವರ್ಷಗಳ ಇತಿಹಾಸ ಇದೆ ಎಂದು ಪಂಡಿತರು ಹೇಳಿದರೂ ನಮ್ಮ ಭಾಷೆ 5000 ವರ್ಷಗಳ ಇತಿಹಾಸಕ್ಕಿಂತಲೂ ಮೀರಿ ಬೆಳೆದಿದೆ, ಇತ್ತೀಚೆಗೆ ಹರಪ್ಪಾ, ಮೊಹಂಜದಾರೋನಲ್ಲಿ ಸಿಕ್ಕಿರುವ ಶಾಸನಗಳಲ್ಲಿರುವ ಲಿಪಿಗಳು ಕನ್ನಡ ಲಿಪಿಯನ್ನು ಹೋಲುತ್ತಿದ್ದು, ಕನ್ನಡ 5000 ವರ್ಷಗಳಷ್ಟು ಹಿಂದಿಯೇ ಬಳಕೆಯಲ್ಲಿತ್ತು ಎಂಬುದನ್ನು ಸಾಬೀತು ಪಡಿಸಲಿದೆ ಎಂದರು. ಈ ಕಾಲ ದೂರವಿಲ್ಲ ಎಂದರು.
ಉನ್ನತ ಶಿಕ್ಷಣಕ್ಕೆ ಇಂಗ್ಲಿಷ್ ಬೇಕು. ಒಪ್ಪೋಣ. ಆದರೆ, ನಮ್ಮ ಮನೆಯಲ್ಲಿ, ದೈನಂದಿನ ವ್ಯವಹಾರದಲ್ಲಿ ಕನ್ನಡ ಬಳಸಲು ಮನಸ್ಸು ಇರಬೇಕು ಎಂದೂ ಅವರೂ ಹೇಳಿದರು. ಕಾರ್ಯಕ್ರಮದಲ್ಲಿ ಡಾ. ಚಂದ್ರಪ್ಪ, ಕಿರುತೆರೆಯ ಕಲಾವಿದೆ ಮಾಳವವಿಕ, ಡಾ. ಶ್ರೀಕಂಠಯ್ಯ ಮೊದಲಾದವರು ಪಾಲ್ಗೊಂಡಿದ್ದರು.