ಹೊಸ ಜವಳಿ ನೀತಿಯಿಂದ ರಫ್ತು ಅಭಿವೃದ್ಧಿ : ಧನಂಜಯಕುಮಾರ್
ಹುಬ್ಬಳ್ಳಿ : ಹೊಸ ಜವಳಿ ನೀತಿಯ ಅನುಷ್ಠಾನದಿಂದ ರಾಷ್ಟ್ರದ ರಫ್ತು ವ್ಯವಹಾರ ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಹತ್ತು ಪಟ್ಟು ಹೆಚ್ಚಲಿದ್ದು, 2010ನೇ ಇಸವಿಯ ವೇಳೆಗೆ ಅದು 50 ಬಿಲಿಯನ್ ಡಾಲರ್ಗಳಿಗೆ ಏರಲಿದೆ ಎಂಬ ವಿಶ್ವಾಸವನ್ನು ಕೇಂದ್ರ ಜವಳಿ ಸಚಿವ ವಿ. ಧನಂಜಯ ಕುಮಾರ್ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದ ಸಚಿವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ರಾಷ್ಟ್ರದ ಹಾಲಿ ರಫ್ತು ವ್ಯವಹಾರ 5 ಬಿಲಿಯನ್ಗಳಾಗಿವೆ ಎಂದರು. ಮುಂದಿನ ದಿನಗಳಲ್ಲಿ ರಾಷ್ಟ್ರ ಜಗತ್ತಿನ ಹತ್ತಿ ಹಾಗೂ ರೇಷ್ಮೆ ವ್ಯಾಪಾರೋದ್ಯಮದ ಸಿಂಹ ಪಾಲನ್ನು ಗಳಿಸಿಕೊಳ್ಳಲಿದೆ. ಇದಕ್ಕೆ ಹೊಸ ಜವಳಿ ನೀತಿ ಸಹಕಾರಿಯಾಗಲಿದೆ ಎಂದರು.
ಸ್ಪಿನ್ನಿಂಗ್ ಮೀಲ್ಗಳ ಅಭಿವೃದ್ಧಿಗೆ ಗಮನ ಹರಿಸಲಾಗಿದ್ದು, ಪ್ರತಿ ಘಟಕವನ್ನು 5 ಲಕ್ಷ ರುಪಾಯಿ ಅನುದಾನ ಹಾಗೂ 15 ಲಕ್ಷ ರುಪಾಯಿ ಸಾಲದ ನೆರವು ನೀಡುವ ಮೂಲಕ ಒಟ್ಟು 20 ಲಕ್ಷ ರುಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.
ಜವಳಿ ನೀತಿಯ ಪರಿಣಾಮವಾಗಿ ವಸ್ತ್ರೋದ್ಯಮ ಸೇರಿದಂತೆ ವಿವಿಧ ಉದ್ಯಮಗಳಿಗೆ ಸಂಬಂಧಿಸಿದಂತೆ ಭಾರತದ ರಫ್ತು ವ್ಯವಹಾರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದೂ ತಿಳಿಸಿದರು.