ಅಂಚೆ ನೌಕರರ ಸಂಘಗಳಲ್ಲಿ ಒಡಕು, ದೆಹಲಿಯ ಕಚೇರಿಗಳಲ್ಲಿ ನೌಕರರ ಹಾಜರಿ
ನವದೆಹಲಿ : ಮೊದಲ ಬಾರಿಗೆ ಎಸ್ಮಾ ಜಾರಿಗೊಳಿಸಿದ ದೆಹಲಿಯಲ್ಲಿನ ಎಲ್ಲ ಅಂಚೆ ಕಚೇರಿಗಳಲ್ಲಿ ಶನಿವಾರ ಹಾಜರಿ ಹಾಕಿದ ನೌಕರರು ಸಂಘಟನೆಯಾಳಗಿನ ಒಡಕನ್ನು ಬಹಿರಂಗಗೊಳಿಸಿದ್ದಾರೆ.
ವಿರೋಧ ಪಕ್ಷಗಳ ಆಡಳಿತವಿರುವ ಐದು ರಾಜ್ಯಗಳಲ್ಲಿ ಎಸ್ಮಾ ಜಾರಿಗೆ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ದೆಹಲಿಯ ಎಲ್ಲಾ 575 ಅಂಚೆ ಕಚೇರಿಗಳ ನೌಕರರು ಕೆಲಸಕ್ಕೆ ಹಾಜರಾಗಿದ್ದು, ದೇಶಾದ್ಯಂತ ಇತರ ರಾಜ್ಯಗಳ ನೌಕರರು ಮುಷ್ಕರ ಮುಂದುವರಿಸಿದ್ದಾರೆ. ಅಂಚೆ ಸೇವೆಗಳನ್ನು ಎರಡು ದಿನದೊಳಗೆ ತಹಬಂದಿಗೆ ತರಬೇಕೆಂದು ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಅಂಚೆ ನೌಕರರ ಮುಷ್ಕರವು ಅಕ್ರಮ ಎಂದು ಕೇಂದ್ರ ಸರಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಎಸ್ಮಾ ಜಾರಿ ಮಾಡಲಾಗಿದ್ದು, ಬಂಧನ, ವಜಾದಂತ ಕ್ರಮಗಳಿಗೆ ನೌಕರರು ಹೆದರಿದ್ದಾರೆ.
ಹಿಮಾಚಲಪ್ರದೇಶ, ಹರಿಯಾಣ, ಉತ್ತರಪ್ರದೇಶ, ಉತ್ತರಾಂಚಲ, ಆಂಧ್ರಪ್ರದೇಶ, ಗುಜರಾತ್ಗಳಲ್ಲೂ ಎಸ್ಮಾ ಜಾರಿಗೊಳಿಸಲಾಗಿದೆ. ಈ ನಡುವೆ 6 ಲಕ್ಷ ನೌಕಕರ ಮುಷ್ಕರ 12ನೇ ದಿಕ್ಕೆ ಕಾಲಿರಿಸಿದ್ದು, ಇತರ ರಾಜ್ಯಗಳೂ ಎಸ್ಮಾ ಜಾರಿ ಮಾಡುವ ಸಾಧ್ಯತೆಯೇ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಹೋರಾಟದ ಮುಂದಿನ ಕ್ರಮಗಳನ್ನು ರೂಪಿಸಲು ನೌಕರ ಸಂಘಟನೆಗಳು ತುರ್ತು ಸಭೆಗಳನ್ನು ನಡೆಸುತ್ತಿವೆ. ಹೋರಾಟದ ಮುಂದುವರಿಸದೆ ಅನ್ಯ ಮಾರ್ಗವಿಲ್ಲ ಎಂದು ಒಕ್ಕೂಟದ ಪದಾಧಿಕಾರಿಗಳು ಹೇಳುತ್ತಿದ್ದಾರೆ.
ಅಂಚೆ ನೌಕರರ ಐದು ಬೇಡಿಕೆಗಳಲ್ಲಿ ಮೂರನ್ನು ಸರಕಾರ ಒಪ್ಪಿಕೊಂಡಿದ್ದು, ಹೆಚ್ಚಿನ ವೇತನ ಮತ್ತು ಅರೆಕಾಲಿಕ ನೌಕರರಿಗೆ ಪಿಂಚಣಿ ನೀಡಲು ಒಪ್ಪಿಕೊಂಡಿಲ್ಲ.
ಮಿಲಿಟರಿ ನೆರವು: ಅಗತ್ಯ ಸೇವಾ ಕಾಯಿದೆ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಅಗತ್ಯ ಸೇವೆ ನಿರ್ವಹಿಸಲು ಮಿಲಿಟರಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಪಡೆ ಮತ್ತು ಶಾಲಾ ವಿದ್ಯಾರ್ಥಿಗಳ ನೆರವಿಗೆ ಕೋರಿಕೊಳ್ಳವಾಗಿದೆ ಎಂದು ಸಂಪರ್ಕ ಖಾತೆ ಸಹಾಯಕ ಸಚಿವ ತಪನ್ ಸಿಕ್ದರ್ ತಿಳಿಸಿದ್ದಾರೆ. ಇಂತಹ ನೆರವು ಪಡೆದು ಅಂಚೆ ವ್ಯವಸ್ಥೆಯನ್ನು ಸುಗಮಗೊಳಿಸುವಂತೆ ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.
(ಇನ್ಫೋ ವಾರ್ತೆ)