ಅಂಚೆ ನೌಕರರ ವಿರುದ್ಧ ಎಸ್ಮಾ ಜಾರಿಗೆ ಐದು ರಾಜ್ಯಗಳ ವಿರೋಧ
ನವದೆಹಲಿ : ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದು ಮುಷ್ಕರ ನಿರತರಾಗಿರುವ ಅಂಚೆ ನೌಕರರ ವಿರುದ್ಧ ಅಗತ್ಯ ಸೇವೆ ನಿರ್ವಹಣಾ ಕಾಯ್ದೆ (ಎಸ್ಮಾ) ಜಾರಿ ಮಾಡಲು ಐದು ರಾಜ್ಯಗಳು ನಿರಾಕರಿಸಿವೆ.
ಎಡಪಂಥೀಯ ಪಕ್ಷಗಳ ಆಡಳಿತವಿರುವ ಮೂರು ರಾಜ್ಯಗಳಾದ ಪಶ್ಚಿಮ ಬಂಗಾಳ, ತ್ರಿಪುರ, ಕೇರಳಗಳೊಂದಿಗೆ ಅಸ್ಸಾಂ ಹಾಗೂ ಬಿಹಾರ್ ಸರ್ಕಾರಗಳು ಎಸ್ಮಾ ಜಾರಿಗೆ ತಮ್ಮ ಅಸಮ್ಮತಿ ಸೂಚಿಸಿವೆ. ಅಂಚೆ ನೌಕರರ ಸಂಘಟನೆಗಳು ಎಸ್ಮಾ ಜಾರಿಯನ್ನು ವಿರೋಧಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳನ್ನು ಕೋರಿರುವುದನ್ನು ಇಲ್ಲಿ ಸ್ಮರಿಸಬಹುದು.
ಅಂಚೆ ನೌಕರರು ತಮ್ಮ ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಲು ಅಗತ್ಯವಿರುವ ಎಲ್ಲಾ ಕಾನೂನು ಬಳಸುವಂತೆ ಗುರುವಾರ ರಾತ್ರಿ ರಾಜ್ಯ ಸರ್ಕಾರಗಳಲ್ಲಿ ಮನವಿ ಮಾಡಿದ್ದ ಕೇಂದ್ರ ಸಚಿವ ಸಂಪುಟ ಕಾರ್ಯದರ್ಶಿಗಳ ಕಾರ್ಯಾಲಯ, ಎಸ್ಮಾ ಜಾರಿ ಮಾಡುವಂತೆ ಪರೋಕ್ಷವಾಗಿ ಸೂಚಿಸಿತ್ತು . ಮುಷ್ಕರ ನಿರತರ ವಿರುದ್ಧ ಎಸ್ಮಾ ಜಾರಿ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಮಾತ್ರ ಇರುವುದು ಗಮನಾರ್ಹ.
ಈ ನಡುವೆ, ನಮ್ಮ ಮುಷ್ಕರಕ್ಕೆ ವಿವಿಧ ಸಂಘಟನೆಗಳ ಬೆಂಬಲವಿದೆ. ನಾವು ಮಾತುಕತೆಗಾಗಿ ಸರ್ಕಾರದ ಕರೆಯ ನಿರೀಕ್ಷೆಯಲ್ಲಿದ್ದೇವೆ ಎಂದು ಕಾರ್ಮಿಕ ಮುಖಂಡ ಭುಟ್ಟಾಚಾರ್ಯ ಹೇಳಿದ್ದಾರೆ. ಆದರೆ, ಸಂಪರ್ಕ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಪಾಟ್ನಾದಲ್ಲಿದ್ದು, ಅವರು ಭಾನುವಾರ ರಾಜಧಾನಿಗೆ ವಾಪಸ್ಸಾಗುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಸೋಮವಾರದವರೆಗೂ ಯಾವುದೇ ಆಶಾದಾಯಕ ಬೆಳವಣಿಗೆಯಾಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ.
(ಇನ್ಫೋ ವಾರ್ತೆ)