ವಿಶೇಷ ಮೋಟಾರ್ ರ್ಯಾಲಿಗೆ ಕುದುರೆ ಮುಖ ಅಭಯಾರಣ್ಯ ನಕಾರ
ಮಂಗಳೂರು : ಇಲ್ಲಿ ಶುಕ್ರವಾರ ಅದ್ದೂರಿಯಿಂದ ಆರಂಭವಾದ ರಾಷ್ಟ್ರೀಯ ಮೋಟಾರ್ ಚಾಂಪಿಯನ್ ಷಿಪ್ ರ್ಯಾಲಿಯ ವಿಶೇಷ ಸ್ಪರ್ಧಾತ್ಮಕ ಹಂತವನ್ನು ರದ್ದುಪಡಿಸಲಾಗಿದೆ.
ವಿಶೇಷ ಸ್ಪರ್ಧಾತ್ಮಕ ಹಂತವು ಕುದುರೆಮುಖ ರಾಷ್ಟ್ರೀಯ ಅಭಯಾರಣ್ಯದ ಮಧ್ಯೆ ಹಾದು ಹೋಗಬೇಕಿತ್ತು. ಅಭಯಾರಣ್ಯ ಪರಿಸರದಲ್ಲಿ ಅತಿ ವೇಗವಾಗಿ ವಾಹನಗಳು ಓಡಾಡಿದಲ್ಲಿ ವನ್ಯಜೀವಿಗಳಿಗೆ ಭಯ ಹುಟ್ಟಿಸುವ ವಾತಾವರಣ ಉಂಟಾಗುವುದಲ್ಲದೆ ಅವುಗಳ ಪ್ರಾಣಕ್ಕೂ ಅಪಾಯವಿರುವ ಕಾರಣ ರ್ಯಾಲಿಗೆ ಅನುಮತಿ ನೀಡಲು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಲಯದ ಅರಣ್ಯಾಧಿಕಾರಿಗಳು ಅನುಮತಿ ನೀಡಲು ನಿರಾಕರಿಸಿದ್ದಾರೆ.
ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಮಂಗಳೂರಿನ ಫೋರ್ ರನ್ನರ್ಸ್ ಮೋಟಾರ್ ಸ್ಪೋರ್ಟಿಂಗ್ ಆ್ಯಂಡ್ ಕಲ್ಚರಲ್ ಅಸೋಸಿಯೇಷನ್ ಜಂಟಿ ಆಶ್ರಯದಲ್ಲಿ ಈ ರಾಷ್ಟ್ರೀಯ ಚಾಂಪಿಯನ್ ಷಿಪ್ ರ್ಯಾಲಿಯನ್ನು ಆಯೋಜಿಸಲಾಗಿತ್ತು. ರ್ಯಾಲಿ ಮಂಗಳೂರಿನ ಮಂಜುರಾನ್ ಹೋಟೆಲ್ನಿಂದ ಆರಂಭವಾಗಿದ್ದು, ಕುದುರೆ ಮುಖ ರಸ್ತೆಯ ಮೂಲಕ ನಡೆಯಬೇಕಿದ್ದ ರ್ಯಾಲಿಯ ಹೊರತಾಗಿ ಶನಿವಾರ ನಡೆಯಬೇಕಿದ್ದ ಉಳಿದ ಎಲ್ಲ ಸ್ಪರ್ಧೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸಂಯೋಜಕರ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)