ಗೋಡೆ ವಿವಾದ : ಘರ್ಷಣೆಯ ಉರಿಯಲ್ಲಿ ಬೇಯುತ್ತಿರುವ ಬೀದರ್
ಬೀದರ್ : ಇಲ್ಲಿನ ಲೇಬರ್ ಕಾಲೋನಿಯ ಚರ್ಚ್ನ ಸುತ್ತಲೂ ರಕ್ಷಣಾ ಗೋಡೆ ನಿರ್ಮಾಣ ಸಂಬಂಧ ಎರಡು ಗುಂಪುಗಳ ನಡುವಿನ ವಿವಾದ ಶುಕ್ರವಾರ ಘರ್ಷಣೆಗೆ ತಿರುಗಿದಾಗ ಪೊಲೀಸರು ಲಾಠಿ ಪ್ರಹಾರ ಮಾಡಿ ಪರಿಸ್ಥಿತಿ ನಿಯಂತ್ರಿಸಿದರು.
ಕಳೆದ ಒಂದು ವಾರದಿಂದ ಚರ್ಚ್ಗೆ ಸಂಬಂಧಿಸಿದಂತೆ ವಾದ ವಿವಾದಗಳು ನಡೆಯುತ್ತಿದ್ದು, ಶುಕ್ರವಾರ ಬೆಳಿಗ್ಗೆ ಕಾಲೋನಿಯ ಒಂದು ಕೋಮಿನವರು ಚರ್ಚ್ನ ಸುತ್ತಲೂ ಗೋಡೆ ನಿರ್ಮಿಸಲಾರಂಭಿಸಿದಾಗ ಅದೇ ಕಾಲೋನಿಯಲ್ಲಿನ ಇನ್ನೊಂದು ಕೋಮಿನ ನಿವಾಸಿಗಳು ಕಾಮಗಾರಿಯನ್ನು ತಡೆಯಲು ಯತ್ನಿಸಿದರು. ಆಗ ನಡೆದ ಬಿಸಿ ಚರ್ಚೆ ಘರ್ಷಣೆಗೆ ತಿರುಗಿ ಎರಡು ಗುಂಪುಗಳು ಕಲ್ಲು ತೂರಾಟ ನಡೆಸಿದ್ದು, ಡಿಎಸ್ಪಿ ಸಿ ದ್ರಾಮಪ್ಪ ಸೇರಿದಂತೆ ಒಟ್ಟು 12 ಮಂದಿಗೆ ಗಾಯವಾಗಿರುವುದಾಗಿ ವರದಿಯಾಗಿದೆ.
ಅಲ್ಲಿನ ಕ್ರಿಶ್ಚಿಯನ್ನರ ಪ್ರಕಾರ, 1986ರಲ್ಲಿ ಕಾಮಗಾರಿಗೆ ಅನುಮತಿ ಸಿಕ್ಕಿದೆ. ಆದರೆ ಇನ್ನೊಂದು ಕೋಮಿನವರ ಪ್ರಕಾರ ಚರ್ಚ್ ಪಕ್ಕ ಗಣಪತಿ ಮೂರ್ತಿ ಇದ್ದು, ಅಲ್ಲಿನ ಮೂರ್ತಿ ಮತ್ತು ಧ್ವಜ ಕಿತ್ತು ಎಸೆದಿದ್ದಾರೆ ಎಂದು ಆಪಾದಿಸಿದ್ದಾರೆ. ತೀವ್ರವಾಗುತ್ತಿದ್ದ ಘರ್ಷಣೆಯನ್ನು ನಿಯಂತ್ರಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಕೆ. ಸಿಂಗ್ ಹೆಚ್ಚುವರಿ ವರಿಷ್ಠಾಧಿಕಾರಿ ಡಿ. ಪ್ರಕಾಶ್ ಸ್ಥಳಕ್ಕೆ ಧಾವಿಸಿದ್ದರು.
(ಇನ್ಫೋ ವಾರ್ತೆ)