ನಾಗಪ್ಪನ ಪರಾರಿ ವೃತ್ತಾಂತ: ಹೊಟ್ಟೆಪಕ್ಷದ ರಂಗಸ್ವಾಮಿಅರ್ಜಿ ಇತ್ಯರ್ಥ
ಬೆಂಗಳೂರು : ವೀರಪ್ಪನ್ ಸೆರೆಯಿಂದ ಪರಾರಿಯಾಗಿ ಬಂದ ನಾಗಪ್ಪ ಅವರು ತಮ್ಮ ಪರಾರಿಯ ಹಿಂದಿನ ವಾಸ್ತವವನ್ನು ಬಹಿರಂಗಪಡಿಸಬೇಕು ಎಂದು ಕೋರಿ ಹೊಟ್ಟೆಪಕ್ಷದ ರಂಗಸ್ವಾಮಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಗುರುವಾರ ಇತ್ಯರ್ಥಪಡಿಸಿತು.
ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ಅಶೋಕ್ ಭಾನ್ ಮತ್ತು ಎ.ವಿ. ಶ್ರೀನಿವಾಸ್ ರೆಡ್ಡಿ ಅವರ ವಿಭಾಗೀಯ ಪೀಠ ಅರ್ಜಿದಾರರು ತಮ್ಮ ಅರ್ಜಿಯನ್ನು ವಾಪಸ್ಸು ಪಡೆಯಲು ಅನುಮತಿ ನೀಡಿದರು. ನವಂಬರ್ 30 ರಂದು ನಾಗಪ್ಪ ಹಾಗೂ ಅರ್ಜಿದಾರರ ಹೇಳಿಕೆಗಳನ್ನು ನ್ಯಾಯಮೂರ್ತಿಗಳು ದಾಖಲಿಸಿಕೊಂಡಿದ್ದರು. ಕತ್ತಲೆಯಲ್ಲಿ ವೀರಪ್ಪನ್ ಅಡಗುತಾಣದಿಂದ ತಪ್ಪಿಸಿಕೊಂಡು ಬಂದುದಾಗಿ ತಿಳಿಸಿದ್ದ ನಾಗಪ್ಪ, ತಮ್ಮ ಮೇಲೆ ಯಾರೂ ಹಲ್ಲೆ ನಡೆಸಿಲ್ಲ ಹಾಗೂ ರಾಜ್ ಮಕ್ಕಳು ತಮ್ಮನ್ನು ಅಕ್ರಮ ಬಂಧನದಲ್ಲಿರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಟಾಡಾ ನ್ಯಾಯಾಧೀಶರಿಂದ ಅಧಿಕಾರ ಸ್ವೀಕಾರ : ಪ್ರಧಾನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಮೂರ್ತಿ ಕೃಷ್ಣಪ್ಪ ಅವರು ಟಾಡಾ ವಿಶೇಷ ನ್ಯಾಯಾಧೀಶರಾಗಿ ಗುರುವಾರ ಅಧಿಕಾರ ಸ್ವೀಕರಿಸಿದರು ಎಂದು ನಮ್ಮ ಮೈಸೂರು ಪ್ರತಿನಿಧಿಯ ವರದಿ ತಿಳಿಸಿದೆ. ನ್ಯಾಯಾಲಯದ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿದ್ದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಂದ್ರಪ್ರಸಾದ್ ಅವರು ಕೃಷ್ಣಪ್ಪನವರಿಗೆ ಅಧಿಕಾರ ವಹಿಸಿಕೊಟ್ಟರು.
(ಇನ್ಫೋ ವಾರ್ತೆ)