ನಕ್ಕೀರನ್ ಗೋಪಾಲ್, ರಾಜ್ ಪುತ್ರರ ವಿರುದ್ಧ ತನಿಖೆಗೆ ಆದೇಶ
ಬೆಂಗಳೂರು : ಕನ್ನಡದ ವರನಟ ರಾಜ್ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿ ಆನಂತರ ಬಿಡುಗಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಕುಮಾರ್ ಪುತ್ರರಾದ ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್ ಅಳಿಯ ಎಸ್.ಎ. ಗೋವಿಂದರಾಜು ಮತ್ತು ಸಂಧಾನಕಾರರಾಗಿದ್ದ ನಕ್ಕೀರನ್ ಗೋಪಾಲ್ ಅವರುಗಳ ವಿರುದ್ಧ ತನಿಖೆಯನ್ನು ನಡೆಸುವಂತೆ ಬೆಂಗಳೂರು 7ನೇ ಹೆಚ್ಚುವರಿ ಮೆಟ್ರೋಪಾಲಿಟನ್ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ.
ಹೊಟ್ಟೆ ಪಕ್ಷದ ರಂಗಸ್ವಾಮಿ ಎಂಬುವವರು ನ್ಯಾಯಾಲಯದ ಮುಂದೆ ಸಲ್ಲಿಸಿದ್ದ ಖಾಸಗಿ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ತನಿಖೆ ನಡೆಸಿ, 2001ನೇ ಜನವರಿ 8ನೇ ತಾರೀಖಿನೊಳಗೆ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ಈ ಸಂಬಂಧ ಆದೇಶ ಪಾಲಿಸಿದ ಸದಾಶಿವ ನಗರ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಡಾ. ರಾಜ್ಕುಮಾರ್ ಅವರ ಕೊನೆಯ ಪುತ್ರ ಪುನೀತ್ ಗ್ರಾನೈಟ್ ವ್ಯವಹಾರದಲ್ಲಿ ತೊಡಗಿದ್ದರು. ಅವರು ತಮಿಳು ನಾಡಿನ ಒಂದು ಸಂಸ್ಥೆಗೆ ಕೋಟಿ ಗಟ್ಟಲೆ ಬಾಕಿದಾರರಾಗಿದ್ದರು, ಈ ಎಲ್ಲದರ ಹಿನ್ನೆಲೆಯಲ್ಲಿ ರಾಜ್ಕುಮಾರ್ ಅಪಹರಣವಾಗಿದೆ. ಇದು ಖಾಸಗಿ ಕಾರಣಕ್ಕಾಗಿ ಆಗಿರುವ ಅಪಹರಣವೇ ಎಂಬುದನ್ನು ಅರಿಯಲು ರಾಜ್ಪುತ್ರರು ಹಾಗೂ ಸಂಧಾನಕಾರ ನಕ್ಕೀರನ್ ಗೋಪಾಲ್ ಅವರುಗಳನ್ನು ತನಿಖೆಗೆ ಒಳಪಡಿಸಿಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.
ಕಾಡಿನಿಂದ ತಪ್ಪಿಸಿಕೊಂಡು ನಾಡಿಗೆ ಓಡಿಬಂದ ನಾಗಪ್ಪ ಮಾರಡಗಿಯನ್ನು ರಾಜ್ ಪುತ್ರರು ಅಕ್ರಮವಾಗಿ ಗೃಹ ಬಂಧನದಲ್ಲಿಟ್ಟು ಥಳಿಸಿದ್ದಾರೆ ಎಂದೂ ಆರೋಪಿಸಿದ್ದ ಅವರು ಮಾರಡಗಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೋರಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
(ಇನ್ಫೋ ವಾರ್ತೆ)