ಆಗತ್ಯ ಸೇವೆ ನಿರ್ವಹಣೆ ಕಾಯ್ದೆಗೂ ಜಗ್ಗೆವು : ಅಂಚೆ ನೌಕರ ಸಮಿತಿ
ಬೆಂಗಳೂರು: ಪಟ್ಟು ಸಡಿಲಿಸದೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಅಂಚೆ ನೌಕರರು ನಡೆಸುತ್ತಿರುವ ಮುಷ್ಕರ ರಾಜ್ಯದಲ್ಲೂ ಹತ್ತು ದಿನ ಪೂರೈಸಿದೆ. ಮುಷ್ಕರವನ್ನು ಕೇಂದ್ರ ಸರಕಾರ ಕಾನೂನು ಬಾಹಿರ ಎಂದು ಘೋಷಿಸಿಯಾಗಿದೆ.
ಹಠ ಬಿಟ್ಟು ಕೆಲಸಕ್ಕೆ ಹಾಜರಾಗುವಂತೆ ರಾಜ್ಯ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಅವರು ರಾಜ್ಯದ ಅಂಚೆ ಇಲಾಖೆ ನೌಕರರಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ನ್ಯಾಯಾಲಯ ನೀಡಿರುವ ತೀರ್ಪುನ್ನು ಉಲ್ಲೇಖಿಸಿ, ಕೆಲಸಕ್ಕೆ ಹಾಜರಾಗದಿದ್ದಲ್ಲಿ ಎಸ್ಮಾ ಜಾರಿ ಗೊಳಿಸಲೂ ಅವಕಾಶ ಇದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಅಂಚೆ ಇಲಾಖೆಯ ಮೇಲಿರುವ ಗುರುತರ ಜವಾಬ್ದಾರಿ ಅರಿತು, ಬಡಜನರಿಗೆ ಉಂಟಾಗಿರುವ ತೊಂದರೆ ಗಮನದಲ್ಲಿಟ್ಟುಕೊಂಡು ಕೆಲಸಕ್ಕೆ ಹಾಜರಾಗುವಂತೆ ಮಾಧ್ಯಮಗಳ ಮೂಲಕವೂ ಅವರು ಮನವಿ ಮಾಡಿದ್ದಾರೆ. ಅಂಚೆ ಸೇವೆ ಸಹಜ ಸ್ಥಿತಿಗೆ ಬರುವುದಕ್ಕೆ ಯಾರಾದರೂ ಅಡ್ಡಿ ಪಡಿಸಿದರೆ ಅದು ನ್ಯಾಯಾಲಯ ನಿಂದನೆ ಆಗುತ್ತದೆ ಎಂದೂ ಅವರು ಹೇಳಿದ್ದಾರೆ.
ಎಸ್ಮಾಕ್ಕೆ ಹೆದರೆವು : ಈ ಮಧ್ಯೆ ತಮ್ಮ ಬೇಡಿಕೆ ಈಡೇರುವ ತನಕ ಹೋರಾಟ ಮುಂದುವರಿಸುತ್ತೇವೆ ಎಂದು ಘೋಷಿಸಿರುವ ಕರ್ನಾಟಕದ ಅಂಚೆ ನೌಕರರ ಸಂಯುಕ್ತ ಕ್ರಿಯಾ ಸಮಿತಿ, ಎಸ್ಮಾ ವಿರುದ್ಧವೂ ಹೋರಾಟಕ್ಕೂ ಸಿದ್ಧ ಎಂದು ಸಾರಿದೆ. ಕಳೆದ ಎರಡು ವರ್ಷಗಳಿಂದಲೂ ಸರಕಾರ ನೀಡಿದ ಪೊಳ್ಳು ಭರವಸೆಗಳನ್ನು ನಂಬಿ ನಾವು ಕೂತಿದ್ದೇವೆ. ಆದರೆ ಈವರೆಗೆ ತಮ್ಮ ಬೇಡಿಕೆಗಳು ಈಡೇರಿಲ್ಲ ಎಂದು ಸಮಿತಿಯ ಸಂಚಾಲಕ ಸವಣೂರ್ ತಿಳಿಸಿದ್ದಾರೆ.
ಈಗ ಸರಕಾರ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಬದಲು ಬಲತ್ಕಾರದಿಂದ ಕೆಲಸ ಸಾಧಿಸುವ ಮಾರ್ಗ ಅನುಸರಿಸುತ್ತಿರುವುದು ದುರ್ದೈವ. ನಮ್ಮ ಕೇಂದ್ರ ಸಮಿತಿಯ ಸದಸ್ಯರು ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ, ಆದರೆ ಅದು ಫಲಪ್ರದವಾಗಿಲ್ಲ ಎಂದೂ ಅವರು ಹೇಳಿದರು. ಮುಷ್ಕರದಿಂದ ಜನರಿಗಾಗುತ್ತಿರುವ ತೊಂದರೆಯ ಬಗ್ಗೆ ನಮಗೂ ವಿಷಾದವಿದೆ ಆದರೆ, ಸರಕಾರ ನಮ್ಮ ಬೇಡಿಕೆಗಳ ಈಡೇರಿಕೆಯ ಬಗ್ಗೆ ಗಮನ ಹರಿಸದೆ, ತಾಳ್ಮೆ ಪರೀಕ್ಷಿಸಿದೆ ಮಿಗಿಲಾಗಿ ಪರ್ಯಾಯ ಕ್ರಮಗಳ ಬಗ್ಗೆಯೇ ಚಿಂತಿಸುತ್ತಾ ನೌಕರರ ಕ್ಷೇಮವನ್ನು ಮರೆತಿದೆ ಎಂದೂ ಅವರು ಆರೋಪಿಸಿದ್ದಾರೆ.
ಮುಖಪುಟ / ಇವತ್ತು... ಈ ಹೊತ್ತು...