ಸಂಸತ್ನಲ್ಲಿ ಬ್ಯಾಂಕಿಂಗ್ ಮಸೂದೆ ಮಂಡನೆ : ಲೋಕಸಭೆಯಲ್ಲಿ ಗದ್ದಲ
ನವದೆಹಲಿ : ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿನ ಸರಕಾರದ ಪಾಲನ್ನು ಕಡಿಮೆ ಮಾಡುವ ಹೊಸ ಬ್ಯಾಂಕಿಂಗ್ ಮಸೂದೆಯನ್ನು ಹಣಕಾಸು ಸಚಿವ ಯಶವಂತ ಸಿನ್ಹಾ ಬುಧವಾರ ಸಂಸತ್ನಲ್ಲಿ ಮಂಡಿಸಿದ್ದಾರೆ.
ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿನ ಈಗಿರುವ ಸರಕಾರದ ಶೇಕಡಾ 51ರಷ್ಟು ಪಾಲನ್ನು 33ಕ್ಕೆ ಇಳಿಸುವ ಸರಕಾರದ ಪ್ರಸ್ತಾವಕ್ಕೆ ಸಿಪಿಐಎಂನ ಬಸುದೇವ್ ಆಚಾರ್ಯ ಸೇರಿದಂತೆ ಇತರ ಸದಸ್ಯರು ಒಕ್ಕೊರಲಿನಿಂದ ವಿರೋಧಿಸಿದರು.
ಸರಕಾರದ ಪಾಲನ್ನು ಕಡಿತಗೊಳಿಸುವ ಸರಕಾರದ ಕ್ರಮ ಸಂವಿಧಾನ ವಿರೋಧಿಕ್ರಮ ಎಂದು ಬಣ್ಣಿಸಿದ ಸದಸ್ಯರು, ರಾಷ್ಟ್ರೀಯ ಸಂಪತ್ತನ್ನು ಮಾರಲು ಆತುರ ತೋರಬಾರದು ಎಂದು ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಸಿದರು. ಸರಕಾರದ ಶೇರುಗಳನ್ನು ಕಡಿತಗೊಳಿಸುವ ನಿರ್ಧಾರ ದೇಶದ ಸಂಪತ್ತನ್ನು ಮಾರುವ ವಿಷಯಕ್ಕೆ ಸಂಬಂಧಿಸಿದ್ದಲ್ಲ. ಈ ನಿರ್ಧಾರವನ್ನು ರಾಷ್ಟ್ರೀಯ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ. ಮಸೂದೆ ಮಂಡನೆ ದಿಢೀರ್ ತೆಗೆದುಕೊಂಡಿರುವ ನಿರ್ಧಾರವಲ್ಲ , ಈ ಬಗ್ಗೆ ಪ್ರತಿ ಸದಸ್ಯರಿಗೂ ನೊಟೀಸ್ ಜಾರಿ ಮಾಡಲಾಗಿದೆ ಎಂದು ಸಿನ್ಹಾ ಸಮರ್ಥಿಸಿಕೊಂಡರು.
ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿನ ಸರಕಾರದ ಪಾಲು ಕಡಿತಗೊಳಿಸಬೇಕೆಂದು ನರಸಿಂಹ ಸಮಿತಿ ಶಿಫಾರಸು ಮಾಡಿದೆ. ಈ ಸಂಬಂಧ ನಿರ್ಧಾರವನ್ನು ಆಗಿನ ಚಂದ್ರಶೇಖರ್ ಸರಕಾರ ತೆಗೆದುಕೊಂಡಿತ್ತು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಚಂದ್ರಶೇಖರ್ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಮಾತ್ರ ಶೇರು ಖರೀದಿಗೆ ಅವಕಾಶ ನೀಡಲು ಆಗ ನಿರ್ಧರಿಸಲಾಗಿತ್ತು. ಬ್ಯಾಂಕುಗಳನ್ನು ಖಾಸಗಿ ವಲಯಕ್ಕೆ ಬಿಟ್ಟುಕೊಡುವ ನಿರ್ಧಾರ ಮಾಡಿರಲಿಲ್ಲ ಎಂದರು.