ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ನಿಧನ
ಬೆಂಗಳೂರು : ಸಮಾಜವಾದಿ ಧುರೀಣ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಮಂಗಳವಾರ ಬೆಳಗಿನ ಜಾವ 2.30ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಪಟೇಲರಿಗೆ ಪತ್ನಿ ಹಾಗೂ ಮೂವರು ಗಂಡು ಮಕ್ಕಳಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಪಿತ್ತಕೋಶದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ನಗರದ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಪಟೇಲ್ ಅವರ ಕರುಳಿನಲ್ಲಿ ರಕ್ತಸ್ರಾವವೂ ಉಂಟಾಗಿತ್ತು. ಸಿಂಗಪುರದ ರೇಡಿಯೋಲಜಿ ಪ್ರೊಫೆಸರ್ ಡಾ. ಟ್ಯಾನ್ ಅವರು ಬಿಪ್ ಚಿಕಿತ್ಸಾ ವಿಧಾನದಿಂದ ರಕ್ತಸ್ರಾವವನ್ನು ನಿಲ್ಲಿಸಿದ್ದರಾದರೂ ಔಷಧೋಪಚಾರಕ್ಕೆ ಪಟೇಲ್ ಅವರ ದೇಹ ಸ್ಪಂದಿಸುತ್ತಿರಲಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದವು. ಕಳೆದ ಕೆಲವು ದಿನಗಳಿಂದ ಪಟೇಲ್ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು.
ಚನ್ನಗಿರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಪಟೇಲ್ ಕಳೆದ ಬಾರಿಯ ಚುನಾವಣೆಯಲ್ಲಿ ವಡ್ನಾಳ್ ರಾಜಣ್ಣ ವಿರುದ್ಧ ಸೋಲನ್ನುಂಡಿದ್ದರು. ಜನತಾದಳದ ಮುಖಂಡರಾಗಿ ಒಡೆದು ಹೋದ ದಳ ಬಳಗಳ ಒಗ್ಗೂಡಿಸಲು ಸತತ ಶ್ರಮವಹಿಸಿದ್ದ ಪಟೇಲ್, ಹರಿತ ಹಾಗೂ ಹಾಸ್ಯಮಯ ಮಾತುಗಾರಿಕೆಗೆ ಹೆಸರಾಗಿದ್ದರು. ಅಂತ್ಯಕ್ರಿಯೆ ಬುಧವಾರ ಕಾರಿಗನೂರಿನಲ್ಲಿ ಸಕಲ ಸರಕಾರಿ ಮರ್ಯಾದೆಗಳೊಂದಿಗೆ ನಡೆಯಲಿದೆ.
ಸಂತಾಪ: ವಿದ್ಯುತ್ ಖಾತೆ ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಹಾಗೂ ಸಂಸತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಪಟೇಲ್ ಅವರ ನಿಧನಕ್ಕೆ ರಾಜ್ಯಪಾಲರಾದ ವಿ.ಎಸ್. ರಮಾದೇವಿ, ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.
ನಿಷ್ಠುರ ಹಾಗೂ ದಕ್ಷ ರಾಜಕಾರಣಿಯಾಬ್ಬರನ್ನು ರಾಜ್ಯ ಕಳೆದುಕೊಂಡಿದೆ ಎಂದು ತಮ್ಮ ಶೋಕ ಸಂದೇಶದಲ್ಲಿ ಮುಖ್ಯಮಂತ್ರಿ ಕೃಷ್ಣ ತಿಳಿಸಿದ್ದಾರೆ.
ಶಾಲೆ - ಕಾಲೇಜಿಗೆ ರಜೆ : ಮಂಗಳವಾರ ರಾಜ್ಯ ಸರಕಾರದ ಎಲ್ಲ ಕಚೇರಿಗಳಿಗೆ ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಗಲಿದ ನಾಯಕನಿಗೆ ಗೌರವ ಅರ್ಪಿಸಲು ರಾಜ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ನಡೆಯಲಿದೆ.