ಕರ್ನಾಟಕ : ಅಂತರ್ಜಲ ಹೆಚ್ಚಳಕ್ಕೆ 84 ಕೋಟಿ ರು. ‘ಅಂತರಗಂಗಾ’ ಯೋಜನೆ
ಬೆಂಗಳೂರು : ನೀರಿನ ಸಮಸ್ಯೆ ಎದುರಿಸುತ್ತಿರುವ ರಾಜ್ಯದ 72 ತಾಲ್ಲೂಕುಗಳಲ್ಲಿ ಮಳೆ ನೀರು ಇಂಗುವಂತೆ ಮಾಡಿ, ಅಂತರಜಲವನ್ನು ಹೆಚ್ಚಿಸಲು ‘ಅಂತರಗಂಗಾ’ ಎಂಬ ಯೋಜನೆಯನ್ನು ಕೈಗೆತ್ತಿಕೊಳ್ಳಲು 84 ಕೋಟಿ ರುಪಾಯಿ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ವಿ.ಮುನಿಯಪ್ಪ ಸೋಮವಾರ ತಿಳಿಸಿದ್ದಾರೆ.
ರಾಜ್ಯದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಅವರ ಜೊತೆ ಚರ್ಚಿಸಿದ್ದೇನೆ. ಕೆಲವು ತಾಲ್ಲೂಕುಗಳಲ್ಲಿ ಕುಡಿಯುವ ನೀರು ಒದಗಿಸಲು 600- 700 ಅಡಿಯಷ್ಟು ಕೊಳವೆ ಬಾವಿ ತೆಗೆಯಬೇಕಿದೆ. ಹಾಗೆ ಮಾಡಿದರೂ, ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದ್ದು, ಫ್ಲೊರೋಸಿಸ್ ರೋಗಕ್ಕೆ ಕಾರಣವಾಗುತ್ತಿದೆ ಎಂಬ ವಿಷಯವನ್ನು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಹಾಗಾಗಿ ರಾಜ್ಯದ ಈ ಮಹತ್ತರ ಯೋಜನೆಗೆ ಕೇಂದ್ರ ಸರ್ಕಾರ ಖಂಡಿತ ಸ್ಪಂದಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅಂತರ ಜಲ ಅಭಿವೃದ್ಧಿಗೆ 471 ಕೋಟಿ ರುಪಾಯಿ ವಿಶ್ವಬ್ಯಾಂಕ್ ನೆರವನ್ನು ಕೋರಲಾಗಿದೆ. ರಾಜ್ಯಕ್ಕೆ ಭೇಟಿ ನೀಡಿದ ವಿಶ್ವಬ್ಯಾಂಕ್ನ ಅಧಿಕಾರಿಗಳೂ ನೆರವು ನೀಡುವ ಕುರಿತು ಗಂಭೀರವಾಗಿ ಯೋಚಿಸಿದ್ದಾರೆ. ಅವರಿಗೂ ಸಮಸ್ಯೆ ಅರ್ಥವಾಗಿದೆ ಎಂದರು.
(ಇನ್ಫೋ ವಾರ್ತೆ)