‘ಧನ್ಯ ಮಿಲನ’ದಲ್ಲಿ ಧ್ವಂಸ ಚಲನ : ಪೊಲೀಸರಿಂದ ಲಾಠಿ ಪ್ರಹಾರ
ಬೆಂಗಳೂರು : ಭಾನುವಾರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಣ್ಣಾವ್ರ ಸನ್ಮಾನ ಸಮಾರಂಭ ‘ಧನ್ಯ ಮಿಲನ’ದ ಸಂದರ್ಭದಲ್ಲಿ ಧ್ವಂಸ ಸಂಚಲನವಾದದ್ದು ಉದಯ ಟಿವಿ ಮತ್ತಿತರ ಟಿವಿ ಚಾನೆಲ್ಗಳ ನಡುವೆ ಕಾರ್ಯಕ್ರಮದ ನೇರ ಪ್ರಸಾರದ ವಿಷಯದಲ್ಲಿನ ಸಮರಕ್ಕೆ ಕನ್ನಡಿ ಹಿಡಿದಂತಿತ್ತು.
ಕಾರ್ಯಕ್ರಮ ಶುರುವಾದದ್ದು ಸಂಜೆ 7ಕ್ಕೆ. ನೇರ ಪ್ರಸಾರದ ಹಕ್ಕು ಪಡೆದಿದ್ದೇವೆ ಎಂದು ಹೇಳಿಕೊಂಡ ಉದಯ ಟಿವಿಯ ಸಿಬ್ಬಂದಿ ಅದಕ್ಕೆ 3 ತಾಸು ಮುಂಚೆಯೇ ಅಲ್ಲಿ ಠಿಕಾಣಿ ಹೂಡಿದ್ದರು. ಮೈದಾನದ ಮುಖ್ಯ ದ್ವಾರದಲ್ಲೇ ಕೆಲವು ಬಾಡಿಗೆ ಗೂಂಡಾಗಳು ಇತರೆ ಖಾಸಗಿ ಟಿವಿ ಚಾನೆಲ್ಗಳ ಸಿಬ್ಬಂದಿಯನ್ನು ತಡೆಯಲೆಂದೇ ನಿಂತಿದ್ದರು. ಎನ್ಡಿಟಿವಿ, ರಿkುೕ, ಸುಪ್ರಭಾತ, ಈ ಟಿವಿ, ಕೊನೆಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ದೂರದರ್ಶನದ ಸಿಬ್ಬಂದಿ ಕೆಲವು ಗೂಂಡಾಗಳು ಮತ್ತು ಪೊಲೀಸರಿಂದ ತೊಂದರೆಗೊಳಗಾದರು. ಖುದ್ದು ಪೊಲೀಸರೇ ಅನೇಕ ಚಾನೆಲ್ಗಳ ಸಿಬ್ಬಂದಿಯನ್ನು ಮೈದಾನದ ಒಳಗೆ ಬರಲು ಬಿಡಲಿಲ್ಲ. ಗೂಂಡಾಗಳು ಅವಾಚ್ಯ ಶಬ್ದಗಳಿಂದ ಅವರನ್ನು ದೂರಿದರು.
ಶತಾಯ ಗತಾಯ ಯತ್ನ ಮಾಡಿ ಒಳ ನಡೆದ ಸುಪ್ರಭಾತ ಚಾನೆಲ್ನ ವರದಿಗಾರರನ್ನು ಉದಯ ಟಿವಿ ಸಿಬ್ಬಂದಿ ಎಂಬ ಬ್ಯಾಡ್ಜ್ ಧರಿಸಿದ್ದ ಕೆಲವರು ಹೊರ ದೂಡಿದರು. ಒಬ್ಬ ವರದಿಗಾರ ಹಲ್ಲೆಗೂ ಒಳಗಾದರು. ಇವನ್ನೆಲ್ಲಾ ನೋಡಿದ ಎನ್ಡಿಟಿವಿ ಮತ್ತು ರಿkುೕ ಟಿವಿ ಸಿಬ್ಬಂದಿ ಮರು ಮಾತಾಡದೆ ಹೊರ ನಡೆದರು.
ರಾಜ್ ಭಾಷಣದ ನಡುವೆಯೇ ಲಾಠಿ ಚಾರ್ಜ್ : ರಾಜ್ ಭಾಷಣ. ಅದೇ ಸಮಯದಲ್ಲಿ ಪ್ರೇಕ್ಷಕ ಸಮೂಹದಲ್ಲಿ ಚಪ್ಪಲಿಗಳು ಹಾರುತ್ತಿವೆ. ಕಲ್ಲು , ಮಣ್ಣಿನ ಧೂಳು ಗಾಳಿಯಲ್ಲಿ ಕಾಣುತ್ತಿದೆ. ಈ ಚಾನೆಲ್ ಸಮರದಲ್ಲಿ ಕಾರ್ಯಕ್ರಮವನ್ನು ಸರಿಯಾಗಿ ವೀಕ್ಷಿಸಲಾಗದ ಜನರ ದಾಂಧಲೆ ನಿಲ್ಲಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದೇ ಇದಕ್ಕೆ ಕಾರಣ. ರಾಜ್ ತಮ್ಮ ಭಾಷಣದ ಮಧ್ಯದಲ್ಲಿ ತಾಳ್ಮೆಯಿಂದಿರುವಂತೆ ಜನರಲ್ಲಿ ಮನವಿ ಕೂಡ ಮಾಡಿದರು.
ಕರ್ನಾಟಕ ಚಲನಚಿತ್ರ ಕ್ರಿಯಾ ಸಮಿತಿ ಆಯೋಜಿಸಿದ್ದ ಈ ಸಮಾರಂಭ ಸಾರ್ವಜನಿಕವಾದದ್ದು. ಕಾರ್ಯಕ್ರಮದ ವೀಕ್ಷಣೆಗೆ ಯಾವುದೇ ಶುಲ್ಕ ಇರಲಿಲ್ಲ. ಕಾರ್ಯಕ್ರಮದ ನೇರ ಪ್ರಸಾರದ ಹಕ್ಕನ್ನು ಉದಯ ಟಿವಿಗೆ ನೀಡಿದ್ದರೂ, ಸಮಾರಂಭದ ವರದಿ ಸಿದ್ಧಪಡಿಸಲು ಎಲ್ಲಾ ಮಾಧ್ಯಮಗಳಿಗೂ ಅವಕಾಶವಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಸಿ.ಎನ್.ಚಂದ್ರು ಶುಕ್ರವಾರ ಹೇಳಿದ್ದರು.
‘ಮುಖ್ಯ ಮಂತ್ರಿ’ಗಳ ಎದುರಲ್ಲೇ... : ಅಂಥಾದರಲ್ಲೂ ಬಾಡಿಗೆ ಗೂಂಡಾಗಳ ಅತಿಯಾದ ವರ್ತನೆಗೆ ಗುರಿಯಾದ ಟಿವಿ ಚಾನೆಲ್ ಸಿಬ್ಬಂದಿಗಳ ಸ್ಥಿತಿಯನ್ನು ಖುದ್ದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ವಾರ್ತಾ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್ ಹಾಗೂ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ನೋಡಿದರು. ಸುದ್ದಿ ಸಂಗ್ರಹಕ್ಕೆ ಯಾವುದೇ ಅಡ್ಡಿ ಉಂಟು ಮಾಡಕೂಡದೆಂದು ವಾರ್ತಾ ಸಚಿವರು ಹೇಳಿದರೂ, ರಾಜ್ ಭಾಷಣ ಮುಗಿಯುತ್ತಿದ್ದಂತೆ ಗೂಂಡಾಗಳು ತಮ್ಮ ವರಸೆ ಮುಂದುವರೆಸಿದರು. ಚಾನೆಲ್ಗಳ ಸಿಬ್ಬಂದಿ ಬೇಸತ್ತು ಹೊರ ನಡೆದರು.
ಪ್ರಸಾರ ಸರಿಯಾಗಿರಲಿಲ್ಲ : ಇಷ್ಟೆಲ್ಲಾ ರಾದ್ಧಾಂತ ಮಾಡಿ, ಏಕಮೇವಾದ್ವಿತೀಯ ಎಂಬ ಹೆಗ್ಗಳಿಕೆ ಉಳಿಸಿಕೊಳ್ಳಲು ಯತ್ನಿಸಿದ ಉದಯ ಟಿವಿಯ ನೇರ ಪ್ರಸಾರದ ಬಗೆಗೆ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ ಭಾಷಣದ ನಡುವೆ ಇದ್ದಕ್ಕಿದ್ದಂತೆ ಜಾಹಿರಾತು ಬರುವುದು, ‘ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು’ ಹಾಡಿನ ತುಣುಕುಗಳಿಗೆ ಯಾವುದೋ ತಮಿಳು ಗೀತೆ ಪ್ರಸಾರವಾದದ್ದರ ಬಗ್ಗೆ ಜನ ಈಗಲೂ ದೂರುತ್ತಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...