ಮುಂದುವರಿದ ಅಂಚೆ ಮುಷ್ಕರ : ಅಗತ್ಯ ಸೇವೆಗೆ ಆಡಳಿತ ಸೇನೆ ನೆರವು!
ನವದೆಹಲಿ : ಡಿಸೆಂಬರ್ 5ರಿಂದ ಅಂಚೆ ಇಲಾಖೆ ನೌಕರರು ಆರಂಭಿಸಿರುವ ಅನಿರ್ದಿಷ್ಟ ಕಾಲಾವಧಿ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟಿದ್ದರೂ ಯಾವುದೇ ಪರಿಹಾರ ಕಂಡಿಲ್ಲ. ನಗರ ಪ್ರದೇಶಗಳಲ್ಲಿ ಕೊರಿಯರ್ ಸೇವೆ ಲಭ್ಯತೆಯ ಹಿನ್ನೆಲೆಯಲ್ಲಿ ಮುಷ್ಕರದ ಬಿಸಿ ಹೆಚ್ಚಾಗಿ ತಟ್ಟಿಲ್ಲವಾದರೂ ಗ್ರಾಮಾಂತರ ಪ್ರದೇಶಗಳಲ್ಲಿ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಎಂ.ಓ, ಟೆಲಿಗ್ರಾಂ ಮೊದಲಾದ ಅಗತ್ಯ ಸೇವೆಗಳಿಗೂ ಪೆಟ್ಟು ಬಿದ್ದಿದೆ. ಈ ನಿಟ್ಟಿನಲ್ಲಿ ಆಡಳಿತ ಸೇನೆಯ ನೆರವನ್ನು ಕೋರಲಾಗಿದೆ. ಅಂಚೆ ನೌಕರರ ಸಂಘಟನೆಗಳು ತಮ್ಮ ಪಟ್ಟು ಸಡಿಲಿಸುವ ಯಾವುದೇ ಲಕ್ಷಣಗಳು ಕಾಣದಿರುವುದರಿಂದ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸುವ ಲಕ್ಷಣಗಳು ಕಂಡು ಬಂದಿವೆ. ಅಂಚೆ ಕಚೇರಿಗಳಲ್ಲಿ, ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ಮೂಟೆಗಟ್ಟಲೆ ಅಂಚೆ ಪತ್ರಗಳು ರಾಶಿ ರಾಶಿಯಾಗಿ ಬಿದ್ದಿವೆ. ರಾಜ್ಯಕ್ಕೂ ಮುಷ್ಕರದ ಬಿಸಿ ಬಲವಾಗಿ ತಟ್ಟಿದೆ.
ರಸ್ತೆಯಂಚಿನಲ್ಲಿರುವ ಅಂಚೆ ಪೆಟ್ಟಿಗೆಗಳು ಭರ್ತಿಯಾಗಿವೆ. ಮತ್ತೊಂದು ಪತ್ರ ಹಾಕಲೂ ಜಾಗವಿಲ್ಲದಷ್ಟು ತುಂಬಿ ಹೋಗಿವೆ. ತಮ್ಮ ದೀರ್ಘ ಕಾಲೀನ ಬೇಡಿಕೆಗಳಾದ ವೇತನ ಹೆಚ್ಚಳ, ಮೂರು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಇಲಾಖೆತರ ನೌಕರರಿಗೂ ಪೂರ್ಣ ಸೌಲಭ್ಯ ನೀಡಿಕೆಯೇ ಮೊದಲಾದ ಬೇಡಿಕೆಗಳ ಈಡೇರಿಕೆಗೆ ಅಂಚೆ ನೌಕರರು ಮುಷ್ಕರ ನಡೆಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.