ಚಿಕ್ಕಮಗಳೂರಿಗೆ ಆಗಮಿಸಿದ ಪಾಂಚಜನ್ಯರಥಯಾತ್ರೆಗೆ ಅದ್ಧೂರಿ ಸ್ವಾಗತ
ಚಿಕ್ಕಮಗಳೂರು : ದತ್ತ ಜಯಂತಿಯ ಕೊನೆಯ ದಿನವಾದ ಭಾನುವಾರ ದತ್ತ ಪೀಠದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿಗಳು ಶಾಂತಿಯುತವಾಗಿ ನಡೆಯುತ್ತಿವೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಮಧ್ಯೆ ಕಾರ್ಯಕ್ರಮಗಳು ಆರಂಭವಾದ ದಿನದಿಂದಲೂ ಭಕ್ತಾದಿಗಳಿಗಿಂತ ಪೊಲೀಸರೇ ಹೆಚ್ಚಾಗಿರುವ ಬಾಬಾಬುಡನ್ಗಿರಿಯ ಗುಹಾಂತರ ದೇವಾಲಯ ಕ್ಷೇತ್ರದ ಜಿಲ್ಲಾ ಕೇಂದ್ರ ಚಿಕ್ಕಮಗಳೂರಿಗೆ ಶನಿವಾರ ಭಜರಂಗ ದಳದ ಪಾಂಚಜನ್ಯ ರಥಯಾತ್ರೆ ಆಗಮಿಸಿತು.
ನವೆಂಬರ್ 30ರಂದು ಶೃಂಗೇರಿಯಿಂದ ಹೊರಟ ಈ ರಥಯಾತ್ರೆ ಮಾಗಡಿ, ಕೈಮರ, ಅಂಬಳೆ, ಹಿರೇಮಗಳೂರು ಮಾರ್ಗವಾಗಿ ಶನಿವಾರ ಮಧ್ಯಾಹ್ನ ಚಿಕ್ಕಮಗಳೂರನ್ನು ಪ್ರವೇಶಿಸಿತು. ಜಿಲ್ಲೆಯಲ್ಲಿ ರಥಯಾತ್ರೆಗೆ ಅಭೂತಪೂರ್ವ ಹಾಗೂ ಪೂರ್ಣ ಕುಂಭ ಸ್ವಾಗತ ನೀಡಲಾಯಿತು.
ಅಯೋಧ್ಯೆ ಸಂಸತ್ ಸದಸ್ಯ ಹಾಗೂ ಭಜರಂಗದಳದ ಸಂಸ್ಥಾಪಕ ಅಧ್ಯಕ್ಷರಾದ ವಿನಯ್ ಕಟಿಯಾರ್ ಮತ್ತು ರಾಜ್ಯ ಭಜರಂಗದಳದ ಸಂಚಾಲಕ ಪ್ರಮೋದ್ ಮುತಾಲಿಕ್ ಅವರು ಶನಿವಾರ ಬೆಳಗ್ಗೆ ಬಾಬಾ ಬುಡನ್ಗಿರಿಗೆ ತೆರಳಿ ದತ್ತ ಪಾದುಕೆಗಳಿಗೆ ಪೂಜೆ ಸಲ್ಲಿಸಿದರು.
ರಥಯಾತ್ರೆ ಜಿಲ್ಲಾ ಕೇಂದ್ರಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪ್ರಾರ್ಥನಾ ಮಂದಿರಗಳ ಬಳಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಿದೆ.
ಅರ್ಚಕರ ನೇಮಕ್ಕೆ ಆಗ್ರಹ : ಈ ಮಧ್ಯೆ ಇಲ್ಲಿಗೆ ಆಗಮಿಸಿರುವ ಭಜರಂಗ ದಳದ ಅಧ್ಯಕ್ಷ ಕಟಿಯಾರ್ ಅವರು, ದತ್ತ ಪೀಠದಿಂದ ಬರುವ ಆದಾಯವನ್ನು ಇತರೆ ಉದ್ದೇಶಕ್ಕೆ ಬಳಸದೆ ನಿಧಿಯಾಂದನ್ನು ಸ್ಥಾಪಿಸಿ, ಹಿಂದೂಗಳ ಪವಿತ್ರ ಸ್ಥಳವಾಗಿರುವ ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಿದ್ದಾರೆ. ಇಲ್ಲಿ ಹಿಂದೂ ಅರ್ಚಕರೊಬ್ಬರನ್ನು ನೇಮಿಸುವಂತೆಯೂ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...