ಆಸ್ಟ್ರೇಲಿಯಾಕ್ಕೆ ಬರಲು ಭಾರತ ಸಾಫ್ಟ್ವೇರ್ ತಜ್ಞರಿಗೆ ಆಹ್ವಾನ
ಬೆಂಗಳೂರು : ಭಾರತದ ಸಾಫ್ಟ್ವೇರ್ ತಂತ್ರಜ್ಞರ ಬುದ್ಧಿಗೆ ವಿದೇಶದಲ್ಲಿ ಬಂಗಾರದ ಬೆಲೆ ಇದೆ. ಅಮೆರಿಕಾ, ಜರ್ಮನಿಗಳಲ್ಲಿ ಇವರಿಗೆ ರತ್ನಗಂಬಳಿಯ ಸ್ವಾಗತವೂ ದೊರಕುತ್ತಿದೆ. ಈಗ ಭಾರತದ ತಂತ್ರಜ್ಞರ ಸೇವೆಯನ್ನು ಬಳಸಿಕೊಳ್ಳಲು ಆಸ್ಟ್ರೇಲಿಯಾ ಸಹ ಮುಂದಾಗಿದೆ.
ಹಾಲಿ ಬೆಂಗಳೂರಿನಲ್ಲಿರುವ ಆಸ್ಟ್ರೇಲಿಯಾದ ಸಂಪರ್ಕ ಖಾತೆ ಸಚಿವರಾದ ಎ. ರಿಚರ್ಡ್ಸ್ ಆಲ್ಸನ್ ಅವರು ಭಾರತದ ಸಾಫ್ಟ್ವೇರ್ ತಂತ್ರಜ್ಞರಿಗೆ ನಮ್ಮ ದೇಶದ ಬಾಗಿಲು ತೆರೆದಿದೆ ಎಂದು ಪ್ರಕಟಿಸಿದ್ದಾರೆ. ಇತರ ದೇಶಗಳಲ್ಲಿರುವಂತೆ ತಮ್ಮ ದೇಶಕ್ಕೆ ಬರಲು ಕಾನೂನು ತೊಡಕಿಲ್ಲ ಎಂದಿರುವ ಅವರು, ಇದರ ಸದುಪಯೋಗ ಪಡೆಯಲು ಭಾರತದ ಸಾಫ್ಟ್ವೇರ್ ತಜ್ಞರಿಗೆ ಸಲಹೆ ಮಾಡಿದ್ದಾರೆ.
ಕೈಗಾರಿಕೆಗಳ ಅಭಿವೃದ್ಧಿಗೆ ಅತ್ಯವಶ್ಯಕವಾಗಿರುವ ಮಾಹಿತಿ ಮತ್ತು ತಂತ್ರಜ್ಞಾನ ಕುರಿತು ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು. ಆಸ್ಟ್ರೇಲಿಯಾದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಮೊದಲು ಅವಕಾಶ ನೀಡುತ್ತೇವೆ. ಆದಾಗ್ಯೂ ಭಾರತೀಯ ತಂತ್ರಜ್ಞರಿಗೆ ನಮ್ಮಲ್ಲಿ ಮುಕ್ತ ಅವಕಾಶ ಇದೆ ಎಂದು ಅವರು ಹೇಳಿದರು.
ಆಸ್ಟ್ರೇಲಿಯಾದ ಸರಕಾರ ಮಾಹಿತಿ ತಂತ್ರಜ್ಞಾನಕ್ಕೆ ಆದ್ಯತೆ ನೀಡಿದೆ. ಭಾರತದ ಜತೆ ಗೂಡಿ ಜಂಟಿ ಉದ್ಯಮ ಸ್ಥಾಪಿಸಲೂ ಮುಂದಾಗಿದೆ ಎಂದು ಅವರು ಹೇಳಿದರು.