ಆಕಾಶವಾಣಿ ಕೇಂದ್ರಗಳ ಖಾಸಗೀಕರಣ ಪ್ರಕ್ರಿಯೆ ಆರಂಭ
ಬೆಂಗಳೂರು : ಆಕಾಶವಾಣಿ ಕೇಂದ್ರಗಳ ಖಾಸಗೀಕರಣದ ಪ್ರಕ್ರಿಯೆಗೆ ಶನಿವಾರ ಬೆಂಗಳೂರಿನಲ್ಲಿ ಚಾಲನೆ ದೊರಕಿದೆ. ಮೊದಲ ಹಂತವಾಗಿ 40 ನಗರಗಳಲ್ಲಿ ಎಫ್.ಎಂ. ಸೇವಾ ವ್ಯವಸ್ಥೆ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಈ ವಿಷಯವನ್ನು ಕೇಂದ್ರ ವಾರ್ತಾ ಸಚಿವರಾದ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ 10 ಕಿ.ವ್ಯಾ. ಸಾಮರ್ಥ್ಯದ ವಿವಿಧ ಭಾರತಿಯ ಎಂ.ಎಮ್. ಸೇವೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಆಕಾಶವಾಣಿಯನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಆರಂಭಗೊಂಡಿದೆ ಎಂದರು. ಆದರೆ, ಆಕಾಶವಾಣಿಯ ಮುಖ್ಯ ವಾಹಿನಿಗಳನ್ನು ಖಾಸಗೀಕರಣ ಮಾಡುವುದಿಲ್ಲ. ಪ್ರಸಾರದ ಗುಣಮಟ್ಟವನ್ನು ಹೆಚ್ಚಿಸಿ, ಉತ್ತಮವಾದ ಶ್ರಾವ್ಯ ಸಾಮರ್ಥ್ಯದೊಂದಿಗೆ ಕಾರ್ಯಕ್ರಮಗಳು ಎಲ್ಲರನ್ನೂ ತಲುಪುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ನಿಟ್ಟಿನಲ್ಲಿ ಫ್ರೀಕ್ವೆನ್ಸಿ ಮಾಡುಲೇಷನ್ (ಎಫ್ಎಂ) ವ್ಯವಸ್ಥೆಯನ್ನು ಆರಂಭಿಸಲಾಗಿದೆ ಎಂದರು. ಎಫ್.ಎಂ. ಸೇವೆಯನ್ನು ಮಾತ್ರ ಖಾಸಗೀಕರಣ ಮಾಡಲಾಗುತ್ತದೆ ಎಂದೂ ಅವರು ಹೇಳಿದರು. ಬೆಂಗಳೂರು, ಅಹ್ಮದಾಬಾದ್, ಜೈಪುರ, ಶ್ರೀನಗರ, ಹೈದರಾಬಾದ್ ಹಾಗೂ ತಿರುವನಂತಪುರಗಳಲ್ಲೂ ಈ ಸೇವೆ ಆರಂಭವಾಗುತ್ತಿದೆ ಎಂದರು.
ಶ್ಲಾಘನೆ : ಮಂಗಳೂರು, ಧಾರವಾಡ, ಮೈಸೂರು ಕೇಂದ್ರಗಳ ಟ್ರನ್ಸ್ಮೀಟರ್ ಸಾಮರ್ಥ್ಯವನ್ನೂ ಹೆಚ್ಚಿಸಲಾಗುತ್ತಿದ್ದು, ನೂರಕ್ಕೆ ನೂರರಷ್ಟು ಶ್ರೋತೃಗಳಿಗೆ ಆಕಾಶವಾಣಿಯ ಸೇವೆ ದೊರಕಿಸಿಕೊಡಲಾಗುವುದು ಎಂದರು. ರಾಜ್ಕುಮಾರ್ ಅಪಹರಣ ಪ್ರಕರಣದ ಸಂದರ್ಭದಲ್ಲಿ ಬೆಂಗಳೂರು ಆಕಾಶವಾಣಿ ಪಾತ್ರವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಕನ್ನಡ ಭಾಷಣ : ಬಳ್ಳಾರಿಯಲ್ಲಿ ಸೋನಿಯಾಗಾಂಧಿ ವಿರುದ್ಧ ಚುನಾವಣೆಗೆ ನಿಂತಿದ್ದ ಸಂದರ್ಭದಲ್ಲಿ ಕನ್ನಡದಲ್ಲಿ ಮಾತನಾಡುತ್ತಿದ್ದ ಸುಷ್ಮಾ ಇಲ್ಲೂ ನಾಲ್ಕು ನಿಮಿಷಗಳ ಕಾಲ ಕನ್ನಡದಲ್ಲಿಯೇ ಭಾಷಣ ಮಾಡಿದರು. ನಾನು ಪುನಃ ಕನ್ನಡ ಕಲಿಯುತ್ತಿದ್ದೇನೆ ಎಂದೂ ಹೇಳಿದರು.