ಸ್ಯಾಂಕಿ ಟ್ಯಾಂಕ್ ಕ್ಲೀನ್ ಮಾಡಲು ಬಿಸಿಸಿಗೆ ಹೈಕೋರ್ಟ್ ನೋಟಿಸು
ಬೆಂಗಳೂರು : ನಗರದಲ್ಲಿ ದೋಣಿ ವಿಹಾರಕ್ಕೆ ಹೆಸರುವಾಸಿಯಾದ ಸ್ಯಾಂಕಿ ಟ್ಯಾಂಕನ್ನು ಶುಚಿಗೊಳಿಸುವಂತೆ ಮಹಾನಗರ ಪಾಲಿಕೆ (ಬಿಸಿಸಿ) ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ಬಿ. ಕೃಷ್ಣ ಭಟ್ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿಗೆ ಹೈಕೋರ್ಟ್ ಸ್ಪಂದಿಸಿದೆ. ಅರ್ಜಿಯಲ್ಲಿ ಭಟ್ ಹೀಗೆ ಬರೆದಿದ್ದರು : ನಗರದ ಸುಂದರ ಕೆರೆಗಳಲ್ಲಿ ಸ್ಯಾಂಕಿ ಕೂಡ ಒಂದು. ಇದು ಬೋಟಿಂಗ್ಗೆ ಹೆಸರುವಾಸಿ. ಆದರೆ ಇತ್ತೀಚೆಗೆ ಕೆರೆ ನೀರು ಕೊಳಚೆ ನೀರಿನಂತಾಗುತ್ತಿದೆ. ಕೆರೆಯ ಬಹುತೇಕ ಕಡೆಗಳಲ್ಲಿ ಪೇಪರ್- ಪ್ಲಾಸ್ಟಿಕ್ಗಳು ತೇಲುತ್ತಿವೆ. ಸಾಲದ್ದಕ್ಕೆ ಜನ ಇದೇ ನೀರಿನಲ್ಲಿ ದನಗಳ ಮೈ ತೊಳೆಯುತ್ತಿದ್ದಾರೆ. ಎಷ್ಟೋ ಮನೆಯ ಕೊಳಕು, ಚರಂಡಿ ನೀರು ಈ ಕೆರೆಗೆ ಹರಿದು ಬರುತ್ತಿದೆ. ಒಂದು ಕಡೆ ಕೊಳೆ- ಕಸ ತುಂಬುತ್ತಿದೆ. ಜೊತೆಗೆ ದಿನೇದಿನೇ ಕೆರೆಯ ನೀರಿನ ಮಟ್ಟ ಇಳಿಮುಖವಾಗುತ್ತಿದೆ.
ಲಕ್ಷ್ಮಣ್ ರಾಜು ಸಮಿತಿ ಈ ಕೆರೆಯನ್ನು ಸ್ವಚ್ಛ ಮಾಡುವಂತೆ ಕೊಟ್ಟಿದ್ದ ನಿರ್ದೇಶನಗಳನ್ನು ಸಂಬಂಧ ಪಟ್ಟವರು ಕಿವಿ ಮೇಲೆ ಹಾಕಿಕೊಂಡಂತಿಲ್ಲ. ಕೆರೆ ನೀರನ್ನು ಸ್ವಚ್ಛಗೊಳಿಸದಿದ್ದಲ್ಲಿ ಬೋಟಿಂಗ್ ಅಸಾಧ್ಯ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...