ಗ್ರಾಮೀಣಾಭಿವೃದ್ಧಿ : ಕೇಂದ್ರ ಸರ್ಕಾರದ ಅನುದಾನ ದುಪ್ಪಟ್ಟು ?
ಬೆಂಗಳೂರು : ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಈಗ ಕೊಡುತ್ತಿರುವ ಅನುದಾನವನ್ನು ಇಮ್ಮಡಿಗೊಳಿಸುವ ಬಗೆಗೆ ಸರ್ಕಾರ ಗಂಭೀರವಾಗಿ ಯೋಚಿಸುತ್ತಿದೆ ಎಂದು ಕೇಂದ್ರ ವಿತ್ತ ಸಚಿವ ಯಶವಂತ ಸಿನ್ಹಾ ಶುಕ್ರವಾರ ತಿಳಿಸಿದ್ದಾರೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಮೇನೇಜ್ಮೆಂಟ್ನಲ್ಲಿ ನಡೆದ ಅಭಿವೃದ್ಧಿಯಲ್ಲಿ ಸುಧಾರಣೆ ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ 2500 ಕೋಟಿ ರುಪಾಯಿ ನೀಡಲಾಗಿದೆ. ಇದನ್ನು ದುಪ್ಪಟ್ಟು ಹೆಚ್ಚಿಸುವ ಬಗ್ಗೆ ಗ್ರಾಮೀಣ ಇಲಾಖೆಯಾಂದಿಗೆ ಚರ್ಚಿಸಲಾಗುತ್ತಿದೆ ಎಂದು ಸಿನ್ಹ ಹೇಳಿದರು.
ನಾವು ಆರ್ಥಿಕ ಅಭಿವೃದ್ಧಿಗೆ ಯಾವುದೇ ರಾಷ್ಟ್ರವನ್ನು ಮಾದರಿಯಾಗಿಟ್ಟುಕೊಳ್ಳಲು ಸಾಧ್ಯವಿಲ್ಲ. ಕೇವಲ 30 ದಶಲಕ್ಷ ಡಾಲರ್ ವಿದೇಶೀ ಬಂಡವಾಳ ನಮಗೆ ಹರಿದು ಬರುತ್ತಿದೆ. ಕಂಪ್ಯೂಟರ್ ಸಾಫ್ಟ್ವೇರ್, ಜೈವಿಕ ತಂತ್ರಜ್ಞಾನ ಮತ್ತು ಔಷಧ ವಿಜ್ಞಾನ ಕ್ಷೇತ್ರಗಳಲ್ಲಿ ನಾವು ಅಭಿವೃದ್ಧಿ ಸಾಧಿಸುತ್ತೇವಾದರೂ, ಇದರಿಂದ ಸಾಮಾನ್ಯ ಜನರಿಗೆ ಏನು ಉಪಯೋಗ ಎಂಬ ಪ್ರಶ್ನೆ ಪ್ರತಿಧ್ವನಿಸುತ್ತಿದೆ. ಕೇವಲ ವಿದೇಶಿ ಬಂಡವಾಳ ಹರಿದು ಬರುವುದರಿಂದ ದೇಶದ ಆರ್ಥಿಕ ಪ್ರಗತಿ ಸಾಧ್ಯವಿಲ್ಲ ಎಂದರು.
ನಮ್ಮ ದೇಶಕ್ಕೆ ಸಮರ್ಪಕವಾದ ಅರ್ಥ ವ್ಯವಸ್ಥೆಯನ್ನು ನಾವೇ ರೂಪಿಸಿಕೊಳ್ಳಬೇಕು. ವೈಯಕ್ತಿಕ ಮಟ್ಟದಲ್ಲಿರುವ ಬಡತನ ನಿವಾರಣೆ ಸುಲಭ. ಒಬ್ಬನಿಗೆ ಕೆಲಸ ಸಿಕ್ಕರೆ ಒಂದು ಸಂಸಾರ ಆರ್ಥಿಕವಾಗಿ ಸಾಕಷ್ಟು ಸುಧಾರಿಸಬಲ್ಲುದು. ಆದರೆ ನಮ್ಮ ದೇಶದ ಬಡತನದ ಸಮಸ್ಯೆ ಹಾಗಲ್ಲ. ಎಷ್ಟೋ ಹಳ್ಳಿಗಳಲ್ಲಿ ಶಾಲೆಗಳಿಲ್ಲ, ಆಸ್ಪತ್ರೆಗಳಿಲ್ಲ. ಈ ನಿಟ್ಟಿನಲ್ಲಿ ಅಭಿವೃದ್ಧಿ ಸಾಧಿಸುವ ಕುರಿತು ನಾವು ಯೋಚಿಸಬೇಕು ಎಂದು ಸಿನ್ಹಾ ತಿಳಿಸಿದರು.
(ಇನ್ಫೋ ವಾರ್ತೆ)