ಕರಾವಳಿ : ಮೂಲಭೂತ ಸೌಕರ್ಯಕ್ಕಾಗಿ 1062 ಕೋಟಿ ರೂಪಾಯಿ ಯೋಜನೆ
ಬೆಂಗಳೂರು : ಕರಾವಳಿ ಭಾಗದ 10 ನಗರ ಮತ್ತು ಪಟ್ಟಣಗಳಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ರೂಪಿಸಲಾಗಿರುವ ಕರ್ನಾಟಕ ಕರಾವಳಿ ಪರಿಸರ ನಿರ್ವಹಣೆ ಯೋಜನೆಗೆ ರಾಜ್ಯ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ.
ಏಷ್ಯಾ ಅಭಿವೃದ್ಧಿ ಬ್ಯಾಂಕ್ ಮತ್ತು ರಾಜ್ಯ ಸರಕಾರಗಳ ಜಂಟಿ ಆಶ್ರಯದಲ್ಲಿನ ಈ ಯೋಜನೆಗೆ 1062 ಕೋಟಿ ರುಪಾಯಿ ವೆಚ್ಚ ತಗುಲಲಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಬಿ. ಕೆ. ಚಂದ್ರಶೇಖರ್ ತಿಳಿಸಿದ್ದಾರೆ.
ಯೋಜನೆಯನ್ನು ರಾಜ್ಯದ ಪಟ್ಟಣ ಮೂಲಭೂತ ಸೌಲಭ್ಯ ಅಭಿವೃದ್ಧಿ ಹಣಕಾಸು ನಿಗಮವು ನಗರಾಭಿವೃದ್ಧಿ ಪ್ರಾಧಿಕಾರ ಪಟ್ಟಣ ನೀರು ಸರಭರಾಜು ಮತ್ತು ಸ್ಥಳೀಯ ಸಂಸ್ಥೆಗಳು ಹಾಗೂ ಕೊಳಚೆ ಮಂಡಳಿಗಳ ನೆರವಿನಿಂದ ಜಾರಿಗೊಳಿಸಲಾಗುವುದು. ರಾಜ್ಯದ 300 ಕಿ. ಮೂ ಉದ್ದದ ಕರಾವಳಿ ಹಾಗು ಪಶ್ಚಿಮ ಘಟ್ಟದ ಮೇಲೆ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸರ ರಕ್ಷಣೆಯನ್ನು ಯೋಜನೆಯಲ್ಲಿ ಪ್ರಮುಖ ಉದ್ದೇಶವನ್ನಾಗಿಟ್ಟುಕೊಳ್ಳಲಾಗಿದೆ. ಮಂಗಳೂರು, ಉಡುಪಿ, ಪುತ್ತೂರು, ಕುಂದಾಪುರ, ಭಟ್ಕಳ, ಅಂಕೋಲಾ, ಶಿರಸಿ, ಕುಂದಾಪುರ, ದಾಂಡೇಲಿ, ಉಳ್ಳಾಲ ಮತ್ತು ಕಾರವಾರ ನಗರಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. ಯೋಜನೆಯಲ್ಲಿ ಕುಡಿಯುವ ನೀರು ನೈರ್ಮಲ್ಯ, ಒಳಚರಂಡಿ ಸೇರಿದಂತೆ ಇತರ ಮೂರಭೂತ ಅಗತ್ಯಗಳನ್ನು ಪೂರೈಸಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.