ನಾನು ಎಲ್ಲಾ ಕ್ರಿಕೆಟಿಗರಿಗೂ ಪಾರ್ಸಲ್ ಕೊಡುತ್ತಿದ್ದೆ- ಇರಾನಿ
ಮಂಬೈ : 5 ವರ್ಷಗಳ ನಿಷೇಧಕ್ಕೆ ಗುರಿಯಾಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಚಿಕಿತ್ಸಕ ಅಲಿ ಇರಾನಿ ಮಿಡ್-ಡೇ ಪತ್ರಿಕೆಗೆ ಕೊಟ್ಟಿರುವ ಸಂದರ್ಶನದಲ್ಲಿ ಮೊದಲ ಬಾರಿಗೆ ಮನ ಬಿಚ್ಚಿ ಮಾತಾಡಿದ್ದಾರೆ.....
ಹೊಟೇಲ್ಗಳಲ್ಲಿ ತಂಗುತ್ತಿದ್ದಾಗ ರೂಂಬಾಯ್ಗಳು ತಂದು ಕೊಡುತ್ತಿದ್ದ ಎಲ್ಲಾ ಪಾರ್ಸಲ್ಗಳನ್ನೂ ಕ್ರಿಕೆಟಿಗರಿಗೆ ನಾನೇ ತಲುಪಿಸುತ್ತಿದ್ದೆ. ಅಜರ್ಗೆ ಮಾತ್ರ ಪಾರ್ಸಲ್ಗಳನ್ನು ತಲುಪಿಸಿದ್ದರೆ ನನ್ನನ್ನು ದೂರುವುದರಲ್ಲಿ ಅರ್ಥವಿರುತ್ತಿತ್ತು. ಅಲ್ಲದೆ ನಾನು ಯಾರ ಪಾರ್ಸಲ್ಗಳನ್ನೂ ಒಡೆದು ನೋಡೋ ಕೆಲಸ ಮಾಡುತ್ತಿರಲಿಲ್ಲ.
ಬಿಸಿಸಿಐ ನನ್ನನ್ನು ಪೋಷಿಸಿದೆ. ಅದಕ್ಕೆ ನಾನು ಆಭಾರಿ. ಸಿಬಿಐ ಮತ್ತು ಮಾಧವನ್ ನನಗೆ ಬುಕ್ಕಿಗಳಿಂದ ಕ್ರಿಕೆಟಿಗರಿಗೆ ಹಣ ಸಂದಾಯ ಮಾಡುವವ ಎಂಬ ಪಟ್ಟ ಕಟ್ಟಿದ್ದಾರೆ. ನಾನು ಎಲ್ಲಾ ಆಟಗಾರರಿಗೆ ಪಾರ್ಸಲ್ ತಲುಪಿಸುವಂತೆ ಈಗ ಆರೋಪಿ ಸ್ಥಾನದಲ್ಲಿ ನಿಂತಿರುವ ಕ್ರಿಕೆಟಿಗರಿಗೂ ಪಾರ್ಸಲ್ ತಲುಪಿಸುತ್ತಿದ್ದೆ. ನನಗೆ ಅದರಲ್ಲೇನಿದೆ ಅನ್ನೋದು ಗೊತ್ತೇ ಇಲ್ಲದ ಮೇಲೆ ನಾನು ತಪ್ಪಿತಸ್ಥ ಹೇಗಾಗುತ್ತೇನೆ?
ಮೇನೇಜ್ಮೆಂಟ್ ಅಥವಾ ಮಂಡಳಿ ಮತ್ತು ಆಟಗಾರರ ನಡುವೆ ಸೌಹಾರ್ದ ಹುಟ್ಟು ಹಾಕಲು ಅನೇಕ ಬಾರಿ ಮಧ್ಯಸ್ಥಿಕೆ ಕೆಲಸ ಮಾಡಿದ್ದೇನೆಯೇ ವಿನಃ ಕ್ರಿಕೆಟ್ನಲ್ಲಿ ಮೋಸ ಮಾಡುವವರಿಗೆ ನೆರವಾಗಿಲ್ಲ. ಎಲ್ಲಾ ಕ್ರಿಕೆಟಿಗರೊಂದಿಗೂ ನಾನು ಚೆನ್ನಾಗೇ ಇದ್ದೆ. ಬರುತ್ತಿದ್ದ ಪ್ರಶಸ್ತಿ ಹಣ ಮತ್ತು ಲೋಗೋ ಹಣವನ್ನು ಎಲ್ಲರೂ ಹಂಚಿಕೊಳ್ಳುತ್ತಿದ್ದೆವು. ಇಂಥಾದರಲ್ಲಿ 60 ಸಾವಿರಕ್ಕೆ ಪಂದ್ಯ ಫಿಕ್ಸ್ ಮಾಡೋ ಕೆಲಸ ಯಾಕೆ ಮಾಡಲಿ?
ಕ್ರಿಕೆಟ್ನಲ್ಲಿ ಮೋಸದಾಟ ನಡೆದಿರಬಹುದು. ಆದರೆ ನಿರ್ದೋಷಿಗಳ ಮೇಲೆ ಹುರುಳಿಲ್ಲದ ಆರೋಪ ಹೊರಿಸುವುದು ತಪ್ಪು. ತನಿಖೆ ಇನ್ನೂ ಸರಿಯಾದ ರೀತಿಯಲ್ಲಿ ನಡೆಸಬಹುದಿತ್ತು ಎಂದು ಇರಾನಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
(ಯುಎನ್ಐ)