ಬಾಬಾ ಬುಡನ್ ಗಿರಿ ದತ್ತ ಜಯಂತಿಗೆ ಪೊಲೀಸ್ ಸರ್ಪಕಾವಲು
ಚಿಕ್ಕಮಗಳೂರು : ಭಾವೈಕ್ಯದ ಸಂಕೇತ ಹಾಗೂ ಧಾರ್ಮಿಕ ಸಾಮರಸ್ಯಕ್ಕೆ ಹೆಸರಾಗಿರುವ ಗುರು ದತ್ತಾತ್ರೇಯ ಪೀಠದಲ್ಲಿ ಡಿಸೆಂಬರ್ 10ರ ಭಾನುವಾರ ನಡೆಯಲಿರುವ ದತ್ತ ಜಯಂತಿಯ ಹಿನ್ನೆಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಭದ್ರತಾ ಕಾರ್ಯಕ್ಕಾಗಿ 6 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಈ ವಿಷಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ರಾಮಚಂದ್ರರಾವ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ರಕ್ಷಣಾ ಕಾರ್ಯಕ್ಕಾಗಿ ಬಾಬಾಬುಡನ್ಗಿರಿ, ಜಿಲ್ಲಾ ಕೇಂದ್ರ ಸ್ಥಾನ ಹಾಗೂ ತಾಲೂಕು ಕೇಂದ್ರಗಳೆಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಬಾಬಾಬುಡನ್ ಗಿರಿಯಲ್ಲಿ ನಾಲ್ವರು ಎಸ್ಪಿಗಳು, 18 ಮಂದಿ ಡಿವೈಎಸ್ಪಿ, 58 ಸರ್ಕಲ್ ಇನ್ಸ್ಪೆಕ್ಟರ್ಗಳು, 150 ಮಂದಿ ಸಬ್ ಇನ್ಸ್ಪೆಕ್ಟರ್ಗಳು, 170 ಎಎಸ್ಐ, 500 ಮುಖ್ಯಪೇದೆಗಳು ಹಾಗೂ 700 ಮಂದಿ ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿದೆ.
ಅಲ್ಲದೆ 25 ಪ್ಲಟೂನ್ ಕೆಎಸ್ಆರ್ಪಿ, 6 ಪ್ಲಟೂನ್ ಡಿಎಆರ್ ಸಿಬ್ಬಂದಿ, ನಗರಕ್ಕೆ 15 ಪ್ಲಟೂನ್ ಕೆಎಸ್ಆರ್ಪಿ ಹಾಗೂ 6 ಪ್ಲಟೂನ್ ಡಿಎಆರ್ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಶುಕ್ರವಾರವೇ ಆರಂಭವಾಗಲಿರುವ ಕಾರ್ಯಕ್ರಮಗಳು ಭಾನುವಾರದವರೆಗೆ ದತ್ತಪೀಠದಲ್ಲಿ ಪೊಲೀಸ್ ಸರ್ಪಕಾವಲಿನಲ್ಲಿ ಜರುಗಲಿವೆ.
ಸಿದ್ಧತೆ : ಶಾಂತಿ ಕಾಪಾಡಲು ಪೊಲೀಸ್ ಬಂದೋಬಸ್ತ್ ಮಾಡಿರುವುದರ ಜತೆಗೆ ಮಾಗಿಯ ಕೊರೆಯುವ ಚಳಿಯಲ್ಲಿ ಗಿರಿಯ ದತ್ತಪೀಠಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಹಲವು ಅನುಕೂಲತೆಗಳನ್ನೂ ಒದಗಿಸಲಾಗಿದೆ. ಗಿರಿಗೆ ಹೋಗುವ ರಸ್ತೆಯನ್ನು ಅಗಲಗೊಳಿಸಲಾಗಿದೆ. ಕ್ಷೇತ್ರದ ಹೊರ ಆವರಣದಿಂದಲೇ ಕಟೆಕಟೆ ನಿರ್ಮಿಸಲಾಗಿದೆ. ಗೋರಿಗಳ ಸುತ್ತಲೂ ಕಬ್ಬಿಣದ ಮುಳ್ಳು ತಂತಿಗಳನ್ನು ಹಾಕಲಾಗಿದೆ. ತಪಾಸಣೆ ಕಾರ್ಯ ಬಿಗಿಗೊಳಿಸಲಾಗಿದೆ.
ನಗರದ ಶಾಲೆ, ಕಾಲೇಜು, ಹಾಸ್ಟೆಲ್, ಛತ್ರಗಳಲ್ಲಿ ಪೊಲೀಸರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮಧ್ಯೆ ಕೋಮು ಸೌಹಾರ್ದ ಕಾಪಾಡುವಂತೆ ಮನವಿ ಮಾಡಲು ಮಾನವ ಸರಪಳಿ ಕಾರ್ಯಕ್ರಮವೂ ನಡೆದಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಿದೆ.