ಮೈಸೂರು ಜೈಲಿನಲ್ಲಿ ಕೈದಿಗಳಿಗಾಗಿ ವಿಶೇಷ ಧ್ಯಾನ ಮಂದಿರ
ಮೈಸೂರು : ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗಾಗಿ ವಿಶೇಷ ಧ್ಯಾನ ಮಂದಿರವನ್ನು ರಚಿಸಲಾಗಿದ್ದು ಶಿಕ್ಷಣ ಸಚಿವ ಎಚ್. ವಿಶ್ವ ನಾಥ್ ಗುರುವಾರದಂದು ಉದ್ಘಾಟಸಲಿದ್ದಾರೆ.
ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮತ್ತು ಲಯನ್ಸ್ ಕ್ಲಬ್ ಹಾಗೂ ಕಾರಾಗೃಹ ಇಲಾಖೆಯ ನೆರವಿನೊಂದಿಗೆ ಈ ಧ್ಯಾನ ಮಂದಿರವನ್ನು ರಚಿಸಲಾಗಿದೆ ಎಂದು ಬ್ರಹ್ಮ ಕುಮಾರಿ ಬಿ.ಕೆ. ಲಕ್ಷ್ಮಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಸುಮಾರು ಒಂದು ಸಾವಿರ ಕೈದಿಗಳಿರುವ ಜೈಲಿನಲ್ಲಿರುವ ಕೈದಿಗಳಲ್ಲಿ ಕೊಲೆ, ಕಳ್ಳತನದಂತಹ ವಿವಿಧ ಅಪರಾಧಗಳನ್ನೆಸಗಿ ಪಶ್ಚಾತ್ತಾಪ ಪಡುವವರಿದ್ದಾರೆ. ಧ್ಯಾನ ಮಂದಿರದಲ್ಲಿ ಕೈದಿಗಳಿಗೆ ಶಾಂತ ಪರಿಸರ ಸಿಗುವುದಲ್ಲದೆ, ಪ್ರಾರ್ಥನೆ, ಧ್ಯಾನಗಳಿಗೆ ಅವಕಾಶವಿರುತ್ತದೆ ಎಂದು ಅವರು ಹೇಳಿದರು.
ಕಾರಾಗೃಹ ಇಲಾಖೆ ಒದಗಿಸಿರುವ ಜಾಗದಲ್ಲಿ ಲಯನ್ಸ್ ಕ್ಲಬ್ ಮತ್ತು ವಿಕಸನ ಸಂಸ್ಥೆಯ ನೆರವಿನೊಂದಿಗೆ ಧ್ಯಾನ ಮಂದಿರದ ಕಟ್ಟಡವನ್ನು ಕಟ್ಟಲಾಗಿದೆ. ಸುಮಾರು 2.50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಧ್ಯಾನ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಮೇಯರ್ ನಾರಾಯಣ್, ರಾಜಯೋಗಿನಿ ಬ್ರಹ್ಮ ಕುಮಾರಿ ಲಕ್ಷ್ಮೀಜಿ , ಹಣಕಾಸು ರಾಜ್ಯ ಸಚಿವ ಎಂ. ಶಿವಣ್ಣ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಎಂದು ಲಕ್ಷ್ಮಿ ಹೇಳಿದರು.
(ಇನ್ಫೋವಾರ್ತೆ)