ಮಂಗಳೂರಿನಲ್ಲಿ ‘ಬೊಂಡ ಮೇಳ’ :ಪೆಪ್ಸಿ, ಕೋಲಾಗಳಿಗೊಂದು ಸವಾಲು
ಮಂಗಳೂರು : ತೆಂಗಿನ ಕಾಯಿ ಮತ್ತು ಎಳನೀರು ಬೆಲೆ ಪಾತಾಳಕ್ಕಿಳಿದಿರುವುದರಿಂದ ಬೇಸತ್ತ ಅಖಿಲ ಭಾರತ ತೆಂಗಿನ ಕಾಯಿ ಬೆಳೆಗಾರರ ಸಂಘಟನೆಯು ಪೆಪ್ಸಿ, ಕೋಕೋ ಕೋಲಾಗಳಿಗೆ ಸ್ಪರ್ಧೆಒಡ್ಡುವ ಉದ್ದೇಶದಿಂದ ಡಿಸೆಂಬರ್ 9ರಂದು ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕದಲ್ಲಿ ಬೊಂಡ ಮೇಳವನ್ನು ಆಯೋಜಿಸಿದೆ.
ಮಂಗಳೂರು ಕನ್ನಡದಲ್ಲಿ ಬೊಂಡವೆಂದರೆ ಎ-ಳನೀರು. ವಾಸ್ತವವಾಗಿ ಪೆಪ್ಸಿ , ಕೋಕೋ ಕೋಲಾಗಳಿಗಿಂತ ಎ-ಳನೀರು ಹೆಚ್ಚು ಪೌಷ್ಠಿದಾಯಕವಾಗಿದ್ದರೂ ಜನ ಫ್ಯಾಷನ್ ನೆಪದಲ್ಲಿ ಕೋಲ್ಡ್ ಡ್ರಿಂಕ್ಸ್ಗೇ ಮೊರೆ ಹೋಗುತ್ತಾರೆ. ಇದರಿಂದಾಗಿ ನಮ್ಮೂರಿನಲ್ಲೇ ಬೆಳೆದ ಎಳೆನೀರು ಮೂರು ಕಾಸಿಗೆ ಮಾ-ರಾಟವಾಗುತ್ತದೆ. ಅಥವ ಕೊಳೆತು ಹೋಗುತ್ತದೆ. ಈ ಎಲ್ಲ ವಿಷಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವಾಗಿ ಬೊಂಡಮೇಳವನ್ನು ಆಯೋಜಿಸಲಾಗಿದೆ ಎಂದು ಸಂಘಟನಾಕಾರರು ಹೇಳಿದ್ದಾರೆ. ಜಿಲ್ಲೆಯ ಅನೇಕ ತೆಂಗು ಬೆಳೆಗಾರರು ಈ ಬೊಂಡ ಮೇಳಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ತೆಂಗಿನ ಕಾಯಿ ಬೆಳೆಗಾರರ ಸಂಘಟನೆಯ ಅಧ್ಯಕ್ಷ ಜಗತ್ ಜೀವನ್ದಾಸ್ ಶೆಟ್ಟಿ , ಕ್ಯಾಂಪ್ಕೋದ ಅಧ್ಯಕ್ಷ ಎಸ್.ಆರ್ ರಂಗಮೂರ್ತಿ , ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ, ಕಿಸಾನ್ ಸಂಘದ ಅಧ್ಯಕ್ಷ ಡಾ. ಸುರೇಶ್ ಕುಮಾರ್ ಬೊಂಡ ಮೇಳದಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬೊಂಡ ಮೇಳವನ್ನು ಬೆಳಿಗ್ಗೆ ಒಂಭತ್ತುವರೆಗೆ ರಾಷ್ಟ್ರೀಯ ಹೆದ್ದಾರಿ 17ರ ಪಕ್ಕ ಇರುವ ಕಲ್ಲಡ್ಕದಲ್ಲಿ ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ತೆಂಗಿನಕಾಯಿ ಬೆಳೆಗಾರರು ಎ-ಳನೀರನ್ನು ಐದು ರೂಪಾಯಿಗೊಂದರಂತೆ ಮಾರಾಟ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಎಳನೀರು ಕುಡಿಯುವುದರಿಂದ ಹೇಗೆ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದನ್ನು ವಿವರಿಸುವ ವಿವಿಧ ಪುಸ್ತಕ, ಕರಪತ್ರಗಳನ್ನು ವಿತರಿಸಲಾಗುವುದು.
ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ 600 ಕೋಟಿಗೂ ಹೆಚ್ಚು ರೂಪಾಯಿಯ ಕೋಲ್ಡ್ ಡ್ರಿಂಕ್ಸ್ ವ್ಯವಹಾರ ನಡೆಯುತ್ತದೆ. ಅದರಲ್ಲಿ ಕರ್ನಾಟಕದ ಪಾಲೇ 250 ಕೋಟಿಗಳಷ್ಟಿದೆ ಎಂದು ಕೃಷಿಕ ಶ್ರೀ ಪಡ್ರೆ ಹೇಳುತ್ತಾರೆ. ಕೋಲ್ಡ್ ಡ್ರಿಂಕ್ಸ್ಗೆ ಬೆರೆಸುವ ಎಸ್ಸೆನ್ಸ್, ಬಣ್ಣಗಳಿಂದ ಆರೋಗ್ಯದ ಮೇಲೆ ಹಾನಿಯಾಗುವುದರ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ಸಿಗುತ್ತಿಲ್ಲ . ಆದರೆ ಎಳನೀರು ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿ ಉಂಟು ಮಾಡುವುದಿಲ್ಲ. ಬದಲಾಗಿ -ಪೌಷ್ಠಿಕ ಆಹಾರವಾಗಿ ಆರೋಗ್ಯ ಪೋಷಿಸುತ್ತದೆ ಎಂದರು. ತೆಂಗಿನಕಾಯಿ ಉತ್ಪಾದನೆಯಲ್ಲಿ ಶೇ 45ರಷ್ಟು ಪಾಲು ತೆಗೆದುಕೊಂಡಿರುವ ಕೇರಳ ಈಗಾಗಲೇ ಬಹುರಾಷ್ಟ್ರೀಯ ಕಂಪೆನಿಗಳು ಉತ್ಪಾದಿಸುವ ತಂಪು ಪಾನೀಯ, ಎ-ಳನೀರಿಗೆ ಒಡ್ಡಿರುವ ಸವಾಲನ್ನು ಸ್ವೀಕರಿಸಿ, ಎ-ಳನೀರಿನ ಪರವಾಗಿ ಬಹು ದೊಡ್ಡ ಪ್ರಚಾರ ಆಂದೋಲನವನ್ನು ಹಮ್ಮಿಕೊಂಡಿದೆ. ಕರ್ನಾಟಕದಲ್ಲೂ ಇಂತಹುದೇ ಕಾರ್ಯಕ್ರಮವನ್ನು ಆಯೋಜಿಸುವ ಅವಶ್ಯಕತೆ ಇದೆ ಎಂದು ಪಡ್ರೆ ವಿವರಿಸಿದರು.
ಬೊಂಡ ಮೇಳದಿಂದ ತೆಂಗಿನಕಾಯಿ ಮತ್ತು ಎಳನೀರಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆರಂಭವಾಗುತ್ತದೆ. ನಂತರದಲ್ಲಿ ಇಂತಹುದೇ ಜಾಗೃತಿ ಅಭಿಯಾನಗಳನ್ನು ಪ್ರತಿ ವಾರ ವಿವಿಧ ಕಡೆಗಳಲ್ಲಿ ಹಮ್ಮಿಕೊಳ್ಳಲಾಗುವುದು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...