ವೀರಪ್ಪನ್ ವಿರುದ್ಧ ಕಾರ್ಯಾಚರಣೆ ನಿಲ್ಲಿಸಲುನೆಡುಮಾರನ್ ಒತ್ತಾಯ
ಮಧುರೈ : ನ್ಯಾಯಮೂರ್ತಿ ಸದಾಶಿವ ಆಯೋಗದ ತನಿಖೆ ಮುಗಿವವರೆಗೆ ವೀರಪ್ಪನ್ ವಿರುದ್ಧದ ಎಸ್ಟಿಎಫ್ ಕಾರ್ಯಾಚರಣೆಯನ್ನು ಕೈ ಬಿಡಲು ಉಭಯ ರಾಜ್ಯ ಸರ್ಕಾರಗಳನ್ನು ತಮಿಳು ರಾಷ್ಟ್ರೀಯ ಆಂದೋಲನ ಒತ್ತಾಯಿಸಿದೆ.
ಸಂಘಟನೆಯ ಮಂಗಳವಾರದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅದರ ಅಧ್ಯಕ್ಷ ಪಿ. ನೆಡುಮಾರನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆಯೋಗವು ತನ್ನ ತನಿಖೆಯನ್ನು ಮುಂದುವರಿಸುವ ಹಂತದಲ್ಲಿ ಉಭಯ ರಾಜ್ಯಗಳು ಎಸ್ಟಿಎಫ್ ಕಾರ್ಯಾಚರಣೆಯನ್ನು ಪುನಃ ಪ್ರಾರಂಭಿಸಿರುವುದು ಜನರನ್ನು ಭಯಭೀತನ್ನಾಗಿಸಿದೆ ಎಂದು ಅವರು ಆಪಾದಿಸಿದರು.
ಅಮಾಯಕರ ಮೇಲೆ ಎಸ್ಟಿಎಫ್ ಎಸಗಿದ ದೌರ್ಜನ್ಯಗಳ ಕುರಿತು ಉಭಯ ರಾಜ್ಯಗಳು ಜಂಟಿ ತನಿಖಾ ಆಯೋಗ ರಚಿಸಬೇಕು ಹಾಗೂ ಎಸ್ಟಿಎಫ್ನಿಂದ ಆಸ್ತಿ ಮತ್ತು ಜೀವಹಾನಿ ನಷ್ಟ ಅನುಭವಿಸಿದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ನೆಡುಮಾರನ್, ವೀರಪ್ಪನ್ ವಿರುದ್ಧ ಅನೇಕ ದೂರುಗಳು ದಾಖಲಾಗಿದ್ದರೂ ಎಸ್ಟಿಎಫ್ ದೌರ್ಜನ್ಯದ ವಿರುದ್ಧ ಈವರೆಗೆ ಒಂದೇ ಒಂದು ದೂರು ದಾಖಲಾಗಿಲ್ಲ ಎಂದರು.
ರಾಜ್ ಬಿಡುಗಡೆಯ ಬಗ್ಗೆ ಶ್ವೇತಪತ್ರ ಪ್ರಕಟಿಸುವಂತೆ ಒತ್ತಾಯಿಸಿರುವ ವಿರೋಧ ಪಕ್ಷಗಳ ಕ್ರಮವನ್ನು ಟೀಕಿಸಿದ ಅವರು, ಅದಕ್ಕೆ ಮೊದಲು ತಮ್ಮ ಕಾಲಾವಧಿಯಲ್ಲಿ ಜಯಲಲಿತಾ ನಡೆಸಿದ 60 ಕೋಟಿ ರುಪಾಯಿ ವೆಚ್ಚದ ಎಸ್ಟಿಎಫ್ ಕಾರ್ಯಾಚರಣೆ ಬಗ್ಗೆ ಶ್ವೇತಪತ್ರ ಪ್ರಕಟಿಸಬೇಕು ಎಂದು ಗೇಲಿಯಾಡಿದರು.
ಜಾರ್ಜ್ ಫರ್ನಾಂಡಿಸ್ ಸತ್ಯ ಹೂಳಲು ಪ್ರಯತ್ನಿಸುತ್ತಿದ್ದಾರೆ
ವೀರಪ್ಪನ್ ಕಾರ್ಯಾಚರಣೆಯಲ್ಲಿ ಉಭಯ ರಾಜ್ಯಗಳು ತಮ್ಮ ಅಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾಗ್ಯೂ, ಕಾರ್ಯಾಚರಣೆಗೆ ಗಡಿ ಭದ್ರತಾ ಪಡೆಗಳನ್ನು ಕಳುಹಿಸುವ ಬಗ್ಗೆ ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ತಳೆದಿರುವ ವಿರೋಧಿ ನಿಲುವನ್ನು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಟೀಕಿಸಿದ್ದಾರೆ.
ಪೊಲೀಸರಿಂದ ಕಾರ್ಯಾಚರಣೆ ನಡೆಸುವ ಮೂಲಕ ಕಠೋರ ಸತ್ಯಗಳನ್ನು ಮುಚ್ಚಿಡಲು ಜಾರ್ಜ್ ಉದ್ದೇಶಿಸಿದ್ದಾರೆ. ಗಡಿ ಭದ್ರತಾ ಪಡೆಗಳ ಕಾರ್ಯಾಚರಣೆಯಿಂದ ಹೊರ ಬೀಳುವ ಸತ್ಯಾಂಶಗಳನ್ನು ಎದುರಿಸಲು ಅವರು ಮುಜುಗರ ಪಡುತ್ತಿದ್ದಾರೆ. ಅವರ ಮಾತುಗಳು ಸ್ವಗತವೋ ಅಥವಾ ಕರುಣಾನಿಧಿ ಪರವಾಗಿವೆಯೋ ಅಥವಾ ಎನ್ಡಿಎ ಸರ್ಕಾರದ ಅಭಿಪ್ರಾಯವೋ ಅರ್ಥವಾಗುತ್ತಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಜಯಲಲಿತಾ ವ್ಯಂಗ್ಯವಾಡಿದರು.
(ಯುಎನ್ಐ)
ವಾರ್ತಾ
ಸಂಚಯ
ಮುಖಪುಟ
/
ವೀರಪ್ಪನ್
ಶಿಕಾರಿ