ಸೀಬರ್ಡ್ ನಿರಾಶ್ರಿತರಿಗಾಗಿ 10 ಕೋಟಿ ವೆಚ್ಚದಲ್ಲಿಮೀನುಗಾರಿಕಾ ಬಂದರು
ಬೆಂಗಳೂರು : ಉತ್ತರಕನ್ನಡ ಜಿಲ್ಲೆಯ ಅಮದಹಳ್ಳಿ ಸಮೀಪ ಸೀಬರ್ಡ್ ನಿರಾಶ್ರಿತರಿಗಾಗಿ 10 ಕೋಟಿ ರುಪಾಯಿ ವೆಚ್ಚದ ಮೀನುಗಾರಿಕಾ ಬಂದರನ್ನು ಸ್ಥಾಪಿಸಲು ಕೇಂದ್ರ ರಕ್ಷಣಾ ಸಚಿವಾಲಯ ನಿರ್ಧರಿಸಿದೆ ಎಂದು ರಾಜ್ಯ ಮೀನುಗಾರಿಕಾ ಸಚಿವ ರಮಾನಾಥ್ ರೈ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಯೋಜನೆಗೆ ಒಪ್ಪಿಗೆ ನೀಡಿದ್ದು, ಕಾಮಗಾರಿಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳುವುದು ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಚಿವರು ಹೇಳಿದರು. ಮಂಗಳೂರು ಹಳೆಯ ಬಂದರನ್ನು 75 ಲಕ್ಷ ರುಪಾಯಿ ವೆಚ್ಚದಲ್ಲಿ ವಿಸ್ತರಿಸಲಾಗುವುದು. 8.32 ಕೋಟಿ ರುಪಾಯಿಗಳ ಗಂಗೊಳ್ಳಿ ಮೀನುಗಾರಿಕಾ ಬಂದರನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕೈಗೆತ್ತಿಕೊಳ್ಳಲಾಗುವುದು. 1.3 ಕೋಟಿ ರುಪಾಯಿ ಅಂದಾಜಿನ ಕಾರವಾರ ಮೀನುಗಾರಿಕೆ ಎರಡನೇ ಹಂತದ ಯೋಜನೆ ಪ್ರಾರಂಭಿಕ ಹಂತದಲ್ಲಿದೆ ಎಂದು ರೈ ಹೇಳಿದರು.
ರಸ್ತೆಗಳನ್ನು ಬಂದರುಗಳಿಗೆ ಸಂಪರ್ಕಿಸುವ ಯೋಜನೆಗೆ ಸಂಬಂಧಿಸಿದಂತೆ ನಬಾರ್ಡ್ನಿಂದ 20 ಕೋಟಿ ರುಪಾಯಿ ನೆರವು ಕೋರಲಾಗಿದೆ. ಬಯಲು ಸೀಮೆ ಅಭಿವೃದ್ಧಿ ಮಂಡಳಿಗೆ ಸಂಬಂಧಿಸಿದ 68 ಕೋಟಿ ರು. ನೆರವಿನ ಪ್ರಸ್ತಾವನೆಯೂ ನಬಾರ್ಡ್ ಮುಂದಿದೆ. ಮೀನುಗಾರರಿಗೆ ಸುಂಕ ರಹಿತವಾಗಿ 50 ಸಾವಿರ ಲೀ. ಡೀಸೆಲ್ ಒದಗಿಸುವುದರಿಂದ ಸರ್ಕಾರಕ್ಕೆ 13 ಕೋಟಿ ರುಪಾಯಿ ನಷ್ಟವಾಗುತ್ತಿದೆ. ಹುಡ್ಕೋ ನೆರವಿನೊಂದಿಗೆ ಸರ್ಕಾರ ನಿರ್ಮಿಸುತ್ತಿರುವ 5 ಸಾವಿರ ಹೆಚ್ಚುವರಿ ಮನೆಗಳನ್ನು ಬಡ ಮೀನುಗಾರರಿಗೆ ಉಚಿತವಾಗಿ ಹಂಚಿಕೆ ಮಾಡಲಿದೆ ಎಂದರು.
ಮೀನುಗಾರಿಕೆಗಾಗಿ ಕೆರೆಗಳನ್ನು ಗುತ್ತಿಗೆ ನೀಡುವ ಪದ್ಧತಿಯನ್ನು ಪರಿಷ್ಕರಿಸಲು ಹಾಗೂ ಇಲಾಖೆಯ ನಿರ್ದೇಶಕರ ಕಚೇರಿಯನ್ನು ಬೆಂಗಳೂರಿನಿಂದ ಮಂಗಳೂರಿಗೆ ವರ್ಗಾಯಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ ಎಂದು ರಮಾನಾಥ ರೈ ತಿಳಿಸಿದರು.
(ಯುಎನ್ಐ)