ಮೂಡಿಗೆರೆಯಲ್ಲಿ ಘರ್ಷಣೆ : ಲಾಠಿ ಪ್ರಹಾರ
ಮೂಡಿಗೆರೆ : ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲದಿಂದ ಗೆದ್ದ ಅಭ್ಯರ್ಥಿಯನ್ನು ಕಾಂಗ್ರೆಸ್ ಕಾರ್ಯಕರ್ತರು ಸಚಿವೆ ಮೋಟಮ್ಮ ಅವರ ಮನೆಯಲ್ಲಿ ಬಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ ನೂರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಸಚಿವರ ಮನೆಯ ಮೇಲೆ ಕಲ್ಲು ತೂರಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ಮಂಗಳವಾರ ಸಂಭವಿಸಿದೆ.
ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಎರಡು ಬಾರಿ ಆಶ್ರುವಾಯು ಶೆಲ್ಗಳನ್ನೂ ಸಿಡಿಸಬೇಕಾಯಿತು. ಇದಕ್ಕೂ ಮುನ್ನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ಸಂದರ್ಭದಲ್ಲಿಯೇ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿತ್ತು.
ಕಲ್ಲು ತೂರಾಟದಲ್ಲಿ ಗೋಣಿ ಬೀಡಿನ ಎಸ್.ಐ. ಶೈಲೇಂದ್ರ ಹಾಗೂ ಪೇದೆ ಹಾಗೂ ಇತರ 20 ಮಂದಿ ಗಾಯಗೊಂಡಿದ್ದಾರೆ. ಸಚಿವೆ ಮೋಟಮ್ಮ ಅವರ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಈ ಮಧ್ಯೆ ಘರ್ಷಣೆ ನಡೆದ ಸಂದರ್ಭದಲ್ಲಿ ಪೊಲೀಸರು ತಮ್ಮ ಅಂಗಡಿಗಳಿಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ್ದೆ ಅಲ್ಲದೆ, ದೌರ್ಜನ್ಯ ನಡೆಸಿದರು ಎಂದು ಆರೋಪಿಸಿದ ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಯನ್ನೂ ನಡೆಸಿದರು.