ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರ
ಹೊಸಕೋಟೆ : ಕೃಷಿ ಹಾಗೂ ರೈತರ ಉಪ ಕಸುಬುಗಳಿಗೆ ತಾಂತ್ರಿಕತೆಯ ಲೇಪ ನೀಡಲು ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ತಾಲ್ಲೂಕಿನ ಅನುಗೊಂಡನಹಳ್ಳಿಯಲ್ಲಿ ಈಗಾಗಲೇ ರೈತ ಸಂಪರ್ಕ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಬಿ.ಕೆ. ಧರ್ಮರಾಜನ್ ತಿಳಿಸಿದ್ದಾರೆ.
ತಾಲ್ಲೂಕಿನ ತವಟಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಜಿಪಿಯು- 28 ತಳಿ ರಾಗಿ ಬೆಳೆ ಕ್ಷೇತ್ರೋತ್ಸವ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಅಧಿಕ ಇಳುವರಿ ಶಕ್ತಿ ಹೊಂದಿರುವ ಹೊಸ ತಳಿಯು ಇಣಕು ರೋಗ ತಡೆಗಟ್ಟುವ ಶಕ್ತಿ ಹೊಂದಿದೆ, ರೈತರು ಹೊಸ ತಳಿಯನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು ಎಂದರು.
ಕ್ರಿಬ್ಕೋದ ರಾಜ್ಯ ಮಾರಾಟ ವ್ಯವಸ್ಥಾಪಕ ಎಚ್.ಪಿ. ಮಂಜುನಾಥ್ ಕ್ಷೇತ್ರೋತ್ಸವವನ್ನು ಉದ್ಘಾಟಿಸಿದರು. ಕೃಷಿ ವಿವಿಯ ವಿಸ್ತರಣಾ ಮುಖ್ಯಸ್ಥ ಯಲ್ಲಪ್ಪ , ಸಹಾಯಕ ಪ್ರಾಧ್ಯಾಪಕ ಕೆ.ಎನ್. ಚಂದ್ರೇಗೌಡ, ಕ್ರಿಬ್ಕೋ ಅಧಿಕಾರಿ ವಿ. ರಾಮಣ್ಣ ಉತ್ಸವದಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)